More

    ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ: ಮೌನ ವಹಿಸಿದ್ದ ಗ್ರಾಮಸ್ಥರಿಗೆ ದಂಡ ವಿಧಿಸಬಹುದು ಎಂದ ಹೈಕೋರ್ಟ್

    ಬೆಂಗಳೂರು: ತಮ್ಮ ಗ್ರಾಮದಲ್ಲಿ ಅಮಾನವೀಯ ಕೃತ್ಯ ನಡೆಯುತ್ತಿದ್ದರೂ, ಅದನ್ನು ತಡೆಯದೆ ಮೌನವಾಗಿದ್ದ ಇಡೀ ಗ್ರಾಮಸ್ಥರಿಗೆ ದಂಡ ವಿಧಿಸಬಹುದಾದ ಸಾಮೂಹಿಕ ಜವಾಬ್ದಾರಿ ನಿಗದಿಪಡಿಸುವ ಮಾದರಿಯಲ್ಲಿ ಯೋಜನೆ ರೂಪಿಸಲು ಹೈಕೋರ್ಟ್ ಸರ್ಕಾರಕ್ಕೆ ಮೌಖಿಕ ಸಲಹೆ ನೀಡಿದೆ.


    ಬೆಳಗಾವಿ ತಾಲೂಕಿನ ವಂಟೂರಿನಲ್ಲಿ ನಡೆದ ಮಹಿಳೆಯ ವಿವಸ್ತ್ರಗೊಳಿಸಿ ಮೆರವಣಿಗೆ ಮತ್ತು ಹಲ್ಲೆ ಪ್ರಕರಣ ಸಂಬಂಧ ಪ್ರಕರಣದ ಸಂಬಂಧ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ದಾಖಲಿಸಿಕೊಂಡು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಸಲಹೆ ನೀಡಿದೆ.


    ವಿಚಾರಣೆ ವೇಳೆ ನ್ಯಾಯಪೀಠ, ಬ್ರಿಟೀಷ್ ಆಡಳಿತದಲ್ಲಿ ವಿಲಿಯಂ ಬೆಂಟಿಂಗ್ ಎಂಬುವವರು ಕಳ್ಳತನ ಮಾಡುವವರಿದ್ದ ಗ್ರಾಮಕ್ಕೆ ಪುಂಡಗಂದಾಯ ಎಂಬ ತೆರಿಗೆ ವಿಧಿಸುತ್ತಿದ್ದರು. ತಪ್ಪು ನಡೆಯುತ್ತಿದ್ದರೂ, ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದ ಸಾರ್ವಜನಿಕರಿಗೂ ಅದೇ ರೀತಿಯಲ್ಲಿ ತೆರಿಗೆ ವಿಧಿಸಲು ಮುಂದಾದಲ್ಲಿ ಗ್ರಾಮಗಳಲ್ಲಿ ಜನರಿಗೆ ಸ್ವಲ್ಪ ಜವಾಬ್ದಾರಿ ಹೆಚ್ಚಾಗಲಿದೆ. ಇಂತಹ ಘಟನೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಮೌನವಾಗಿರದೆ ಕನಿಷ್ಠ ರಕ್ಷಣಾ ಕ್ರಮಕ್ಕೆ ಮುಂದಾಗಲಿದ್ದಾರೆ ಎಂದು ಪೀಠ ತಿಳಿಸಿತು. ಅಲ್ಲದೇ, ಈ ರೀತಿಯ ಸಂದೇಶ ರವಾನೆಯಾಗಲೇಬೇಕು. ಗ್ರಾಮದ ಎಲ್ಲರಿಗೂ, ನಿರ್ದಿಷ್ಟವಾಗಿ ತಪ್ಪು ಮಾಡಿದವರು ಹಣ ಪಾವತಿಸುವಂತೆ ಮಾಡಬೇಕು ಎಂದು ಪೀಠ ತಿಳಿಸಿತು.
    ಇಂತಹ ಘಟನೆ ನಡೆಯುತ್ತಿರುವ ಸಂದರ್ಭದಲ್ಲಿ, ಕೃತ್ಯದಲ್ಲಿ ಭಾಗಿಯಾಗಿರುವವರಿಗಿಂತಲೂ ಅದನ್ನು ನೋಡುತ್ತಾ ಮೂಖ ಪ್ರೇಕ್ಷಕರಂತೆ ನಿಂತಿದ್ದವರ ಅತ್ಯಂತ ಅಪಾಯಕಾರಿ ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು.

    ಹಿರೋಗಳಾಗಲು ಬಯಸುತ್ತಾರೆ:
    ನ್ಯಾ.ದೀಕ್ಷಿತ್ ಅವರು, ನೆರೆದಿದ್ದವರ ಮುಂದೆ ಆರೋಪಿಗಳು ಹಿರೋಗಳಾಗಲು ಬಯಸುತ್ತಾರೆ. ಇದು ಸಾಮೂಹಿಕ ಮೂರ್ಖತನ, ಗ್ರಾಮಸ್ಥರ ಬೇಜವಾಬ್ದಾರಿತನ ಎಂದು ಕಟುವಾಗಿ ನುಡಿದರು.
    ಜತೆಗೆ, ಗ್ರಾಮದ ಸಾಕ್ಷರತೆ ಪ್ರಮಾಣವೇನು? ಸರ್ಕಾರ ಯಾವಾಗಲೂ ಆಲಸಿಯಾಗಿ ವರ್ತಿಸುತ್ತದೆ. ಜನರ ಭಾಗಿದಾರಿಕೆ ಹೇಗಿದೆ? ಇಂಥ ಘಟನೆಗಳನ್ನು ನಿಯಂತ್ರಿಸುವುದಾದರೂ ಹೇಗೆ? ನಾವು ನಾಗರಿಕ ಸಮಾಜ ಎಂದು ಹೇಳಿಕೊಳ್ಳುತ್ತೇವೆ. ಇದರಲ್ಲಿ ಗ್ರಾಮಸ್ಥರ ಪಾತ್ರ ಏನಿದೆ? ಈ ಘಟನೆಗೆ ಜನರು ಏಕೆ ಮೂಕ ಪ್ರೇಕ್ಷಕರಾಗಿದ್ದರು ಎಂಬುದಕ್ಕೆ ಕಾರಣಗಳಿವೆಯೇ? ಅವರು ಪೊಲೀಸ್, ನ್ಯಾಯಾಂಗ, ರಾಜಕೀಯ ವ್ಯಕ್ತಿಗಳಿಗೆ ಹೆದರಿದ್ದಾರೆಯೇ? ಎಂದು ಪ್ರಶ್ನಿಸಿದರು.
    ಈ ವೇಳೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ಜನ ಏಕೆ ಅಪರಾಧದ ಬಗ್ಗೆ ಮಾಹಿತಿ ನೀಡುವುದಿಲ್ಲ ಎಂಬ ಸಾಮಾಜಿಕ ಆಯಾಮವನ್ನು ನಿರ್ಲಕ್ಷಿಸಲಾಗದು. ತಮ್ಮನ್ನು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸಿಲುಕಿಸಲಾಗುತ್ತದೆ. ತಮಗೆ ಸೂಕ್ತ ಗೌರವ ಸಿಗುವುದಿಲ್ಲ ಎಂದು ಸಾಕ್ಷಿಗಳು ಹೆದರುತ್ತಾರೆ ಎಂದು ಪ್ರಶ್ನಿಸಿದರು.
    ಇದಕ್ಕೆ ನ್ಯಾಯಮೂರ್ತಿ ದೀಕ್ಷಿತ್, ಕೆಲವು ಕಡೆಗಳಲ್ಲಿ ಹೊರತುಪಡಿಸಿ ಪೊಲೀಸ್ ಠಾಣೆಗಳಲ್ಲಿ ಸಾಕ್ಷಿಗಳು ಮತ್ತು ಆರೋಪಿಗಳಿಗೆ ವ್ಯತ್ಯಾಸವೇ ಇರುವುದಿಲ್ಲ. ಇದು ಜನರಿಗೆ ಒಪ್ಪಿಗೆಯಾಗುವುದಿಲ್ಲ. ಪೊಲೀಸರ ನಡೆತೆ, ನ್ಯಾಯಾಲಯವೂ ಸಹ ಜನರಲ್ಲಿ ನಂಬಿಕೆ ಹುಟ್ಟುವಂತೆ ಮಾಡುವುದಿಲ್ಲ ಎಂದು ತಿಳಿಸಿದರು. ಅಷ್ಟೇ ಅಲ್ಲದೆ, ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಇಡೀ ಗ್ರಾಮದಲ್ಲಿ ಯಾರೂ ಏಕೆ ಮುಂದೆ ಬರಲಿಲ್ಲ. ಅದು ಏಕೆ ಹಾಗಾಯಿತು. ಈ ವಿಚಾರಗಳನ್ನು ಸಂಗ್ರಹಿಸಬೇಕು. ಇದನ್ನು ಕಾನೂನು ಆಯೋಗಕ್ಕೆ ತಿಳಿಸಬೇಕು. ಅದು ಕಾನೂನು ರೂಪಿಸಲು ಸಲಹೆ ಮಾಡಬಹುದು. ಈ ರೀತಿಯಲ್ಲಿ ಕಾನೂನು ಮುನ್ನಡೆಯುತ್ತದೆ. ಇಲ್ಲವಾದಲ್ಲಿ ಅದು ಜನರ ಕಾನೂನಾಗುವುದಿಲ್ಲ. ಜನರ ಬದುಕನ್ನು ಕಾನೂನು ಆಧರಿಸಿರಬೇಕು. ಆಗ ಅದಕ್ಕೆ ಅರ್ಥಬರುತ್ತದೆ. ಇಲ್ಲವಾದಲ್ಲಿ ಅದೊಂದು ಅಪರಿಚಿತ ದೇಹವಾಗಿಯೇ ಉಳಿದುಕೊಳ್ಳಲಿದೆ ಎಂದು ಪೀಠ ಬೇಸರದಿಂದ ತಿಳಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts