ಬೆಂಗಳೂರು: ರಾಜ್ಯದಲ್ಲಿ ಕರೊನಾಗೆ ಬಲಿಯಾದವರ ಅಂತ್ಯಸಂಸ್ಕಾರವನ್ನು ಅಮಾನವೀಯವಾಗಿ ನೆರವೇರಿಸುತ್ತಿರುವ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತ ಸರ್ಕಾರ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನೂ ವಿಧಿಸುತ್ತಿದೆ.
ಕೋವಿಡ್ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಸ್ಪಷ್ಟ ಕಾನೂನು ಜಾರಿಗೆ ತರುತ್ತೇವೆ. ಯಾರೇ ಆದ್ರು ಮಾನವೀಯತೆ ಮರೆಯಬಾರದು. ವ್ಯಕ್ತಿ ಶವ ಆದ ಕೂಡಲೇ ಅದನ್ನು ಅಮಾನವೀಯವಾಗಿ ನೋಡೋದು ಮನುಷ್ಯತ್ವ ಅಲ್ಲ. ಇಂತಹ ಘಟನೆಯನ್ನು ಸರ್ಕಾರ ಖಂಡಿಸುತ್ತದೆ ಎಂದಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಬಳ್ಳಾರಿಯಲ್ಲಿ ಇತ್ತೀಚಿಗೆ ಕರೊನಾಗೆ ಬಲಿಯಾದ 9 ಮಂದಿಯ ಶವಗಳನ್ನು ಒಂದೇ ಗುಂಡಿಗೆ ಎಸೆದು ಮಣ್ಣು ಮಾಡಿದ ಘಟನೆಯನ್ನು ಖಂಡಿಸಿದ್ದಾರೆ. ಈ ಸಂಬಂಧ 6 ಸಿಬ್ಬಂದಿಗೆ ತಕ್ಕ ಶಿಕ್ಷೆ ನೀಡಲಾಗಿದೆ ಎಂದೂ ತಿಳಿಸಿದ್ದಾರೆ. ಅಂದಹಾಗೆ ಆ 6 ಮಂದಿಗೆ ಆಗಿರುವ ಶಿಕ್ಷೆ ಏನು ಗೊತ್ತಾ?
ಇದನ್ನೂ ಓದಿರಿ ಸಗಣಿ-ಗಂಜಲ ಬಳಸಿದ್ರೆ ಕೋವಿಡ್ ಬರಲ್ಲ!
ಬಳ್ಳಾರಿಯಲ್ಲಿ 9 ಶವವನ್ನು ಒಂದೇ ಗುಂಡಿಗೆ ಹಾಕಿ ಅಂತ್ಯಸಂಸ್ಕಾರ ಮಾಡಿದ ಪ್ರಕರಣ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿ ಕ್ಷಮೆ ಕೇಳಿದ್ದಾರೆ. ಈ ಸಂಬಂಧ 6 ಜನರನ್ನ ಅಮಾನತು ಮಾಡಲಾಗಿದೆ ಎಂದು ಡಾ.ಕೆ. ಸುಧಾಕರ್ ವಿವರಿಸಿದ್ದಾರೆ.
ಮತ್ತೆ ಇಂತಹ ಘಟನೆಗೆ ಸರ್ಕಾರ ಆಸ್ಪದ ಕೊಡುವುದಿಲ್ಲ. ಕರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಕುರಿತು ಶೀಘ್ರವೇ ವಿಶೇಷ ಕಾನೂನು ಜಾರಿಗೆ ತರುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.