ಶಿವಮೊಗ್ಗ: ಮಗನ ರಾಜಕೀಯ ಭವಿಷ್ಯಕ್ಕಾಗಿ ತನ್ನ ಕರ್ಮಭೂಮಿಯನ್ನೇ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಟ್ಟುಕೊಟ್ಟಿದ್ದಾರೆ. ಮುಂಬರುವ ವಿಧಾನಸಬೆ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ, ಹಾಗಾಗಿ ನನ್ನ ಕ್ಷೇತ್ರ ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂದು ಬಿಎಸ್ವೈ ಶುಕ್ರವಾರ ಘೋಷಣೆ ಮಾಡಿದ್ದಾರೆ. ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ತಂದೆಯವರ ಮಾರ್ಗದರ್ಶನ ಹಾಗೂ ಪಕ್ಷದ ನಿರ್ಧಾರದಂತೆ ನಡೆದುಕೊಳ್ಳುವೆ ಎಂದಿದ್ದಾರೆ.
ಶಿಕಾರಿಪುರದ ಮುಖಂಡರು ಮತ್ತು ಕಾರ್ಯಕರ್ತರು ತಂದೆಯ ಮೇಲೆ ಒತ್ತಡ ಹೇರಿದ್ದರು. ತಿಂಗಳ ಹಿಂದೆ ಬೆಂಗಳೂರಿಗೂ ಬಂದು ಒತ್ತಡ ಹಾಕಿದ್ರು. ಅದರಂತೆ ತಂದೆಯವರು ಇಂದು ತೀರ್ಮಾನ ಪ್ರಕಟಿಸಿದ್ದಾರೆ. ಇದರ ಜತೆಗೆ ಪಕ್ಷ ಏನು ತೀರ್ಮಾನ ಮಾಡುತ್ತೋ ಅದನ್ನು ಆಧರಿಸಿ ನಾನು ನಿರ್ಧಾರ ಮಾಡುವೆ. ಈ ವಿಚಾರದಲ್ಲಿ ತಂದೆ ಮೇಲೆ ನಾನು ಒತ್ತಡ ಹಾಕುವ ಪ್ರಶ್ನೆಯೇ ಉದ್ಭವಿಸಲ್ಲ. ಯಡಿಯೂರಪ್ಪ ಅವರಿಗೆ ನಿವೃತ್ತಿ ಅನ್ನೋದು ಇಲ್ಲ. ಅವರ ಡಿಕ್ಷನರಿಯಲ್ಲಿ ನಿವೃತ್ತಿ ಎನ್ನುವ ಪದವೇ ಇಲ್ಲ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ವೇಳೆ, ‘ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿಯನ್ನ ಅಧಿಕಾರಕ್ಕೆ ತರುತ್ತೇನೆ’ ಎಂದು ವಿಪಕ್ಷಗಳಿಗೆ ಯಡಿಯೂರಪ್ಪ ಸವಾಲು ಹಾಕಿದ್ದರು. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾರೆ. ಪಕ್ಷವನ್ನ ಅಧಿಕಾರಕ್ಕೆ ತರಲು ಶ್ರಮಿಸುತ್ತಾರೆ. ಹಿಂದೆ ಕೂಡ ಬಿಜೆಪಿ ಪಕ್ಷದ ಸಂಘಟನೆಯ ಕೆಲಸ ಮಾಡಿದ್ರು. ಮುಂದೆಯೂ ಮಾಡ್ತಾರೆ ಎಂದು ವಿಜಯೇಂದ್ರ ಹೇಳಿದರು.
ಪುತ್ರನಿಗಾಗಿ ಕರ್ಮಭೂಮಿಯನ್ನೇ ಬಿಟ್ಟುಕೊಟ್ಟ ಯಡಿಯೂರಪ್ಪ! ಶಿಕಾರಿಪುರದಲ್ಲಿ ಬಿಎಸ್ವೈ ಮಹತ್ವದ ಘೋಷಣೆ