ಕಲಬುರಗಿ: 18ನೇ ಶತಮಾನದ ಸಂತ ಶರಣಬಸವೇಶ್ವರರ ದಾಸೋಹ ಜೀವನ ಹಾಗೂ ಅವರು ರೂಪಿಸಿದ್ದ ದಾಸೋಹ ಸಂಸ್ಕೃತಿಯನ್ನು ಶರಣಬಸವೇಶ್ವರ ಸಂಸ್ಥಾನದ ಪ್ರಸ್ತುತ ಪೀಠಾಧಿಪತಿ ಶ್ರೀ ಡಾ. ಶರಣಬಸವಪ್ಪ ಅಪ್ಪ, ದಾಕ್ಷಾಯಿಣಿ ಅವ್ವ ಹಾಗೂ ಚಿ.ದೊಡ್ಡಪ್ಪ ಅಪ್ಪ ಅವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ನಗರದಲ್ಲಿ ನಿರ್ಗತಿಕರಿಗೆ ಊಟದ ಪಾಕೇಟ್ ಸಿದ್ಧಪಡಿಸಿ ಪ್ರತಿದಿನ ವಿತರಿಸಲಾಗುತ್ತಿದೆ. ದೇವಸ್ಥಾನಕ್ಕೆ ದೇವರ ದರ್ಶನಕ್ಕೆಂದು ಆಗಮಿಸಿದವರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿತ್ತು. ಕರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಲಾಕ್ಡೌನ್ ನಿಮಿತ್ತ ಮಂದಿರಕ್ಕೆ ಭಕ್ತರು ಬರದಂತೆ ನೋಡಿಕೊಳ್ಳಲಾಗುತ್ತಿದೆ. ಹೀಗಾಗಿ ನಿರ್ಗತಿಕರು, ಬಡವರು ಇದ್ದಲ್ಲಿಗೆ ಊಟದ ಪ್ಯಾಕೇಟ್ ವಿತರಿಸುವ ಮೂಲಕ ದಾಸೋಹ ಕೈಂಕರ್ಯ ಮುಂದುವರಿಸಲಾಗುತ್ತಿದೆ.
ದಾಕ್ಷಾಯಿಣಿ ಅವ್ವನವರ ವೈಯಕ್ತಿಕ ಆಸಕ್ತಿ ಹಾಗೂ ಸ್ವನೇತೃತ್ವದೊಂದಿಗೆ ದಾಸೋಹ ಸಂಸ್ಕೃತಿಯನ್ನು ಅಗತ್ಯವಿರುವರ ಮನೆ ಬಾಗಿಲಿಗೆ ಕೊಂಡೊಯ್ಯಲಾಗಿದೆ. ದಿನದಿಂದ ದಿನಕ್ಕೆ ಹೆಚ್ಚಿನ ರೀತಿಯಲ್ಲಿ ಆಹಾರ, ನೀರು ಇತರ ಅಗತ್ಯ ವಸ್ತುಗಳನ್ನು ಹಾಗೂ ಸಾವಿರಾರು ನಿರ್ಗತಿಕರಿಗೆ ಆಹಾರ ವಿತರಿಸುವ ಅವ್ವಾಜೀಯವರ ಕಾರ್ಯ ಶ್ಲಾಘನೀಯ.