ಚಿತ್ರದುರ್ಗ: ಕೋವಿಡ್-19ರ ಈ ಸಂಕಷ್ಟದ ಸಮಯದಲ್ಲಿ ಸಿಎಂ ಪರಿಹಾರ ನಿಧಿ ಹಾಗೂ ಪಿಎಂ ಕೇರ್ಸ್ಗೆ ಸಂಗ್ರಹವಾಗಿರುವ ಹಣದ ಮೊತ್ತವನ್ನುಬಹಿರಂಗ ಪಡಿಸುವಂತೆ ಮಾಜಿ ಸಚಿವ ಎಚ್.ಆಂಜನೇಯ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸಂಗ್ರಹಿಸಿರುವ ದೇಣಿಗೆ, ಎಲ್ಲ ರಾಜ್ಯಗಳಿಗೆ ಸಮಾನ ಹಂಚಿಕೆ ಆಗಬೇಕು ಎಂದು ತಿಳಿಸಿದರು.
ನೊಂದ ಜನರಿಗೆ ಎರಡು ತಿಂಗಳ ರೇಷನ್ ಕೊಟ್ಟಿದ್ದೇವೆ ಎನ್ನುವ ರಾಜ್ಯಸರ್ಕಾರ, ಅದು ಸಿದ್ದರಾಮಯ್ಯ ಜಾರಿಗೊಳಿಸಿದ್ದ ಅನ್ನಭಾಗ್ಯದ ಕೊಡುಗೆ ಎಂಬುದನ್ನು ಮರೆತಿದೆ ಎಂದು ವ್ಯಂಗ್ಯವಾಡಿದರು.
ರೈತರ ಬೆಳೆಗಳಿಗೆ ಮಾರುಕಟ್ಟೆ ಸೌಕರ್ಯ ಒದಗಿಸುವುದು ಸರ್ಕಾರದ ಕರ್ತವ್ಯ. ಲಾಕ್ಡೌನ್ ಆದೇಶಗಳನ್ನು ಜನರು ತಪ್ಪದೇ ಪಾಲಿಸ ಬೇಕು. ಉಚಿತ ಹಾಲು ವಿತರಣೆಯಲ್ಲಿ ಆಗುತ್ತಿರುವ ಲೋಪದ ಬಗ್ಗೆ ತನಿಖೆ ನಡೆಸಬೇಕೆಂದರು.
ರಾಮುಲು ವಿರುದ್ಧ ಅಸಮಾಧಾನ: ಕುಡಿವ ನೀರು ಸಹಿತ ಜಿಲ್ಲೆಯ ಸಮಸ್ಯೆಗಳನ್ನು ಆಲಿಸುತ್ತಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ವಿರುದ್ಧ ಹರಿಹಾಯ್ದ ಆಂಜನೇಯ, ರೈತರು, ಕಾರ್ಮಿಕರು, ಪ್ರತಿಪಕ್ಷದವರ ಜತೆ ಚರ್ಚಿಸಿ ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.
ಈ ನಿಟ್ಟಿನಲ್ಲಿ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು ಜಿಲ್ಲೆಯ ಬೇಡಿಕೆಗಳ ಕುರಿತು ಶೀಘ್ರದಲ್ಲೇ ಸಚಿವರ ಗಮನಕ್ಕೆ ತರುತ್ತೇವೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ. ತಾಜ್ಪೀರ್, ಮುಖಂಡರಾದ ಡಿ.ಎನ್.ಮೈಲಾರಪ್ಪ, ಹಾಲೇಶ್, ಎನ್.ಡಿ.ಕುಮಾರ್ ಇದ್ದರು.