ಮೈಸೂರು: ಬಿಜೆಪಿ ನೇತೃತ್ವ ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮೇಲೆ ತೀವ್ರ ಕುತೂಹಲ ನೆಟ್ಟಿದೆ. ಸಚಿವ ಸ್ಥಾನದ ಮೇಲೆ ಅನೇಕರು ಕಣ್ಣಿಟ್ಟಿದ್ದು, ಹೈಕಮಾಂಡ್ ಮಟ್ಟದಲ್ಲೂ ಲಾಬಿ ನಡೆಸುತ್ತಿದ್ದಾರೆ. ಇದರ ನಡುವೆ ಮಾಜಿ ಸಚಿವ ಆರ್.ಶಂಕರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲೆ ಸಚಿವ ಸ್ಥಾನಕ್ಕಾಗಿ ಲಾಜಿಕಲ್ ಒತ್ತಡ ಹಾಕಿದ್ದಾರೆ.
ಈಗೀಗ ಉಪಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಇಲ್ಲವೆಂಬ ಮಾತುಗಳು ಕೇಳಿಬರುತ್ತಿದೆ. ಇದರಿಂದ ಎಚ್ಚೆತ್ತಿರುವ ಶಂಕರ್, ನಾನು ಚುನಾವಣೆಗೇ ನಿಂತಿಲ್ಲ. ಹೀಗಾಗಿ ನನಗೆ ಅವಕಾಶ ಸಿಗುತ್ತದೆ ಎಂದು ಲಾಜಿಕಲ್ ವಾದವನ್ನು ಮಂಡಿಸಿದ್ದಾರೆ.
ನಾನು ಈ ಹಿಂದೆ ಸಚಿವನಾಗಿದ್ದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಟ್ಟೆ. ನಾಯಕರು ಹೇಳಿದಂತೆಲ್ಲ ನಡೆದುಕೊಂಡಿದ್ದೇನೆ. ಚುನಾವಣೆಗೆ ನಿಲ್ಲಬೇಡಿ, ಪರಿಷತ್ತಿಗೆ ಆಯ್ಕೆ ಮಾಡತ್ತೇವೆ ಎಂದು ಹೇಳಿದ್ದರು. ಹೀಗಾಗಿ ನನಗೆ ಅವಕಾಶ ಕೈತಪ್ಪುವುದಿಲ್ಲ ಎಂದಿದ್ದಾರೆ.
ಲಕ್ಷ್ಮಣ್ ಸವದಿ ಮತ್ತು ನಮ್ಮ ನಡುವೆ ಪೈಪೋಟಿ ಇಲ್ಲ. 11 ಶಾಸಕರೊಟ್ಟಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಏನಾಗುತ್ತೋ ನೋಡೋಣ ಎಂದು ನಂಜನಗೂಡಿನಲ್ಲಿ ಶ್ರೀಕಂಠೇಶ್ವರ ದರ್ಶನ ಬಳಿಕ ಮಾಧ್ಯಮದವರೊಂದಿಗೆ ಮಾಜಿ ಸಚಿವ ಆರ್.ಶಂಕರ್ ಹೇಳಿಕೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)