ಮುಂಬೈ: ವೀರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಲು ವಿರೋಧಿಸುವವರನ್ನು ಅಂಡಮಾನ್ ಜೈಲಿನಲ್ಲಿ ಎರಡು ದಿನ ಇಡಬೇಕು ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಕಿಡಿ ಕಾರಿದ್ದಾರೆ.
ಸಾವರ್ಕರ್ ಅವರನ್ನು ವಿರೋಧಿಸುವವರು ಯಾವ ಪಕ್ಷದವರೇ ಆಗಲಿ, ಯಾವ ಸಿದ್ಧಾಂತದವರೇ ಆಗಲಿ ಅವರನ್ನು ಸಾವರ್ಕರ್ ಅವರನ್ನು ಬ್ರಿಟಿಷರು ಇರಿಸಿದ್ದ ಅಂಡಮಾನ್ ಜೈಲಿನಲ್ಲಿ ಇಡಬೇಕು. ಆಗ ಅವರಿಗೆ ಗೊತ್ತಾಗುತ್ತದೆ, ಸಾವರ್ಕರ್ ಅವರ ದೇಶಕ್ಕೆ ಕೊಡುಗೆ ಏನು ಎಂದು ಎಂದಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಬೇಕು ಮತ್ತು ಬೇಡ ಎಂದು ವಾದ ವಿವಾದಗಳು ಎದ್ದಿವೆ. ಈ ಮೊದಲು ರಾಹುಲ್ ಗಾಂಧಿ ವೀರ ಸಾವರ್ಕರ್ ಬಗ್ಗೆ ಸಲ್ಲದ ಮಾತುಗಳನ್ನಾಡಿ ವಿವಾದಕ್ಕೊಳಗಾಗಿದ್ದರು.
ಇದಕ್ಕೆ ವೀರ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ರಾಹುಲ್ ಗಾಂಧಿಯವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ರಾಹುಲ್ ಗಾಂಧಿಯವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಾರ್ವಜನಿಕವಾಗಿ ಥಳಿಸಬೇಕು. ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ರಾಹುಲ್ ಗಾಂಧಿ ದೇಶ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಇಂತಹ ಅವಹೇಳನ ಮಾಡುತ್ತಿರುವುದು ಇದೇ ಮೊದಲ ಬಾರಿಗೆ ಅಲ್ಲ. ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಸರ್ಕಾರದ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ರಂಜಿತ್ ಹೇಳಿದರು. (ಏಜೆನ್ಸೀಸ್)