ಶೃಂಗೇರಿ: ಶ್ರೀ ಶಾರದಾ ಪೀಠದಲ್ಲಿ ಬುಧವಾರ ಲಲಿತಾಪಂಚಮಿ ಪ್ರಯುಕ್ತ ಶ್ರೀ ಶಾರದಾಂಬೆಗೆ ಜಗದ್ಗುರುಗಳು ವಿಶೇಷ ಪೂಜೆ ಸಲ್ಲಿಸಿದರು. ವಿವಿಧ ಪುಷ್ಪಗಳು, ಆಭರಣಗಳಿಂದ ಅಂಕೃತಗೊಂಡ ಜಗನ್ಮಾತೆಯನ್ನು ಭಕ್ತರು ಕಣ್ತುಂಬಿಗೊಂಡರು. ಮಕ್ಕಳ ಅಕ್ಷರಾಭ್ಯಾಸಕ್ಕಾಗಿ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಮಠಕ್ಕೆ ಆಗಮಿಸಿದ್ದರು.
ಅಡಕೆ ಬೆಳೆಗಾರರ ಸಂಕಷ್ಟ ಪರಿಹಾರ ಸಮಿತಿಯಿಂದ ಶ್ರೀ ಶಾರದಾಂಬಾ ಸನ್ನಿಧಿಯಲ್ಲಿ ಮಲೆನಾಡಿನ ರೈತರು ಸಂಕಲ್ಪಗೈದರು. ಬಳಿಕ ಗುರುಭವನದಲ್ಲಿ ಜಗದ್ಗುರುಗಳ ದರ್ಶನ ಮಾಡಿ ಫಲ-ಪುಷ್ಪ್ಪ ಹಾಗೂ ಸಮಷ್ಠಿ ಭಿಕ್ಷೆ ಸಮರ್ಪಿಸಿ ಆಶೀರ್ವಾದ ಪಡೆದರು. ರೈತರ ಸಂಕಷ್ಟ ಬೇಗ ಪರಿಹಾರವಾಗಲಿ. ಕಾಲಕಾಲಕ್ಕೆ ಮಳೆ ಬಂದು ಬೆಳೆ ಸಮೃದ್ಧವಾಗಲಿ ಎಂದು ಜಗದ್ಗುರುಗಳು ಆಶೀರ್ವದಿಸಿದರು. ಶ್ರೀ ಶಾರದೆ ಸನ್ನಿಧಿಯಲ್ಲಿ ಲಕ್ಷ ಕುಂಕುಮಾರ್ಚನೆ, ಲಲಿತಾಹೋಮ ಪೂರ್ಣಾಹುತಿ, ರಾತ್ರಿ ದಿಂಡಿ ಉತ್ಸವ, ಈಶ್ವರಗಿರಿ ಶ್ರೀ ಮಲಹಾನಿಕರೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಏಕಾದಶವಾರ ರುದ್ರಾಭೀಷೇಕ ಮತ್ತು ರುದ್ರಹೋಮ ನೆರವೇರಿಸಲಾಯಿತು.