ತ್ಯಾಗರ್ತಿ: ವಿದ್ಯಾಸಂಸ್ಥೆಗಳು ಶಿಕ್ಷಣದ ಜತೆಗೆ ಸಂಸ್ಕಾರ ಹಾಗೂ ಹಿರಿಯರನ್ನು ಗೌರವಿಸುವ ಸಂಪ್ರದಾಯವನ್ನು ಕಲಿಸಬೇಕು ಎಂದು ಉಳ್ಳೂರು ಶ್ರೀ ಸಿಗಂದೂರೇಶ್ವರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿಳಿಗಲ್ಲೂರು ಕೃಷ್ಣಮೂರ್ತಿ ಹೇಳಿದರು.
ಸಮೀಪದ ಉಳ್ಳೂರು ಸಿಗಂದೂರೇಶ್ವರಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಮೂಹ ಸಂಸ್ಥೆಗಳ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವದ ಅಧ್ಯಕ್ಷತೆ ಮಾತನಾಡಿ, ವಿದ್ಯೆಯ ಜತೆಗೆ ಸಂಸ್ಕಾರ ಕಲಿಸದಿದ್ದರೆ ಮುಂದೆ ಭವ್ಯ ಭಾರತ ನೋಡಲು ಸಾಧ್ಯವಿಲ್ಲ ಎಂದು ರಾಷ್ಟ್ರಕವಿ ಕುವೆಂಪು ಹೇಳಿದಂತೆ ನಾವು ಸಂಸ್ಕಾರದ ಜತೆಗೆ ಹಿರಿಯರಿಗೆ ಗೌರವ ಕೊಡುವುದನ್ನು ಕಲಿಸದಿದ್ದರೆ ದೇಶದಲ್ಲಿ ಅನಾಥಾಶ್ರಮದ ಸಂಖ್ಯೆ ಜಾಸ್ತಿ ಆಗುತ್ತದೆ. ಕೇವಲ ಮೆರಿಟ್ ಇರುವ ವಿದ್ಯಾರ್ಥಿಗಳು ಮಾತ್ರ ವಿದ್ಯಾವಂತರಲ್ಲ, ಸಂಸ್ಕಾರ ಕಲಿತವರು ನಿಜವಾದ ವಿದ್ಯಾವಂತರು ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಅ.ಪು.ನಾರಾಯಣಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಪಾಲಕರಾದ ಶಿಜೋ ಅಗಸ್ಟೀನ್ ಹೊಸಗುಂದ ಹಾಗೂ ಶಾಮಲಾ ಪ್ರದೀಪ್ ಕಲ್ಸೆ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಯಿತು. ಸಂಸ್ಥೆ ಕಾರ್ಯದರ್ಶಿ ಕೆ.ಮಮತಾ ಇದ್ದರು.