ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ಕಮಲಾ ಹಂಪನಾ ಹೆಸರಿನ ವಿಶೇಷ ದತ್ತಿ ಉಪನ್ಯಾಸಕ್ಕೆ ಸಂಶೋಧಕಿ ಹಾಗೂ ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪದ್ಮಾ ಶೇಖರ್ ಆಯ್ಕೆಯಾಗಿದ್ದಾರೆ. ಕಮಲಾ ಅವರು ಸಂಘದಲ್ಲಿ ದತ್ತಿನಿಧಿ ಸ್ಥಾಪಿಸಿದ್ದು, ಪ್ರತಿವರ್ಷ ಅವರ ಸಾಹಿತ್ಯ ಕುರಿತ ವಿಶೇಷ ಉಪನ್ಯಾಸಕ್ಕೆ ಸಂಶೋಧಕರೊಬ್ಬರನ್ನು ಆಯ್ಕೆ ಮಾಡಲಾಗುತ್ತದೆ. ನಾಡೋಜ ಕಮಲಾ ಹಂಪನಾ ಸಾಹಿತ್ಯ ವೇದಿಕೆ ನೀಡುವ ಕಮಲಾ ಹಂಪನಾ ಪ್ರಶಸ್ತಿಗೆ ಕವಿ ಮಾಹೆರ್ ಮನ್ಸೂರ್ ಮತ್ತು ಸಾಮಾಜಿಕ ಹೋರಾಟಗಾರ್ತಿ ದು. ಸರಸ್ವತಿ ಆಯ್ಕೆಯಾಗಿದ್ದಾರೆ. ವಿಶೇಷ ದತ್ತಿ ಉಪನ್ಯಾಸ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನ. 19ರಂದು ಬೆಳಿಗ್ಗೆ 10 ಗಂಟೆಗೆ ಗಾಂಧಿ ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ತಿಳಿಸಿದ್ದಾರೆ.