ಶ್ರವಣಬೆಳಗೊಳ: ಗಾಂಧೀಜಿ ಅವರು ಅಹಿಂಸೆಯ ಮಾರ್ಗದಲ್ಲಿಯೇ ಬ್ರಿಟಿಷರಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಪಡೆಯಬೇಕು ಎಂದು ಪಣ ತೊಟ್ಟು, ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುತ್ತಲೇ ಹೋದರೆ ಇಡೀ ಪ್ರಪಂಚವೇ ನಾಶವಾಗುವುದು ಎಂದು ನಂಬಿದ್ದರು ಎಂದು ಬಾಹುಬಲಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಬಬನ್ ಪಾರಿಸ ದಾತವಾಡೆ ಹೇಳಿದರು.
ಪಟ್ಟಣದ ಅಂಬಿಕಾ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಮತ್ತು ಶಾರದಾ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಾಂಧೀಜಿ ಕೇವಲ ಭಾರತದಲ್ಲಿ ಮಾತ್ರವಲ್ಲದೆ ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿ ಅಲ್ಲಿಯೂ ಮಹಾತ್ಮ ಎನಿಸಿಕೊಂಡವರು. ಬ್ರಿಟಿಷರ ವಿರುದ್ಧ ಶಾಂತಿಯಿಂದಲೇ ಹೋರಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ್ದರು ಎಂದು ಸ್ಮರಿಸಿದರು.
ಮುಖ್ಯಶಿಕ್ಷಕ ಡಿ.ಪುಷ್ಪರಾಜ್, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಶಾಲೆಯ ಸುತ್ತಮುತ್ತಲ ಆವರಣದಲ್ಲಿ ಸ್ವಚ್ಛತಾ ಅಭಿಯಾನ ನೆರವೇರಿತು.
ಶ್ರವಣಬೆಳಗೊಳದ ಅಂಬಿಕಾ ಶಾಲೆಯಲ್ಲಿ ಸೋಮವಾರ ಮಹಾತ್ಮ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು. ಬಬನ್ ಪಾರಿಸಾ ದಾತವಾಡೆ, ಡಿ.ಪುಷ್ಪರಾಜ್ ಮುಂತಾದವರಿದ್ದರು.