ಲಕ್ಷ್ಮೇಶ್ವರ: ಎರಡು ತಿಂಗಳ ರಜೆ ಬಳಿಕ ಬುಧವಾರ ಶಾಲೆಗಳು ವಿಶೇಷ ರೀತಿಯಲ್ಲಿ ಪ್ರಾರಂಭಗೊಂಡವು. ಶಾಲೆಯಲ್ಲಿ ಮತ್ತೆ ಮಕ್ಕಳ ಕಲರವ ಕೇಳಿ ಬಂದಿತು. ಶಾಲೆಗೆ ಬಣ್ಣ ಹಚ್ಚಿ, ತಳಿರು ತೋರಣಗಳ ಸಿಂಗಾರ ಮಕ್ಕಳ ಮನ ಸೆಳೆಯಿತು.
ಮೊದಲ ದಿನ ಸರಸ್ವತಿ ಮತ್ತು ವಿನಾಯಕ ಪೂಜಾ ಕಾರ್ಯ ಕೈಗೊಳ್ಳಲಾಯಿತು. ಮಕ್ಕಳು ಬಣ್ಣ ಬಣ್ಣದ ಹೊಸ ಉಡುಗೆಯುಟ್ಟು ಬಂದಿದ್ದರು. ಅವರಿಗೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿ ಮತ್ತು ಶಿಕ್ಷಕರು ಹೂವು, ಚಾಕೋಲೇಟ್ ನೀಡಿ ಸ್ವಾಗತಿಸಿದರು.
ಶಾಲೆಯಲ್ಲಿ ಹಬ್ಬದ ವಾತಾವರಣ ಕಂಡು ಬಂದಿತು. ಬಿಸಿಯೂಟದಲ್ಲಿ ಸಿಹಿ ತಿನಿಸು ತಯಾರಿಸಿ ಮಕ್ಕಳಿಗೆ ಬಡಿಸಲಾಯಿತು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 4ರಲ್ಲಿ ಶಾಲಾ ಪ್ರಾರಂಭೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ‘ಶಾಲೆ ಕಡೆ- ಮಕ್ಕಳ ನಡೆ’ ಜಾಗೃತಿ ಜಾಥಾಕ್ಕೆ ಡೊಳ್ಳು ಬಡಿಯುವ ಮೂಲಕ ಶಾಸಕ ಡಾ. ಚಂದ್ರು ಲಮಾಣಿ ಚಾಲನೆ ನೀಡಿದರು. ಬಳಿಕ ಅವರು ಮಕ್ಕಳಿಗೆ ಹೂವು, ಸಿಹಿ ನೀಡಿ ಮಕ್ಕಳನ್ನು ಬರಮಾಡಿಕೊಂಡರು.
ಬಿಇಒ ಜಿ.ಎಂ. ಮುಂದಿನಮನಿ, ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ, ಪ್ರವೀಣ ಬಾಳಿಕಾಯಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷೆ ರಾಜೇಶ್ವರಿ ಹರಕುಣಿ ಅಧ್ಯಕ್ಷತೆ ವಹಿಸಿದ್ದರು.
ಬಸವರಾಜ ಓದುನವರ, ಬಿಆರ್ಸಿ ಈಶ್ವರ ಮೇಡ್ಲೇರಿ, ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪುರ, ಡಿ.ಎಚ್. ಪಾಟೀಲ, ಸಿಆರ್ಪಿ ಉಮೇಶ ನೇಕಾರ, ಸತೀಶ ಬೋಮಲೆ, ಎಂ.ಬಿ. ಹೊಸಮನಿ, ಅನಿಲ ಮುಳಗುಂದ, ಎಚ್.ಎಸ್. ರಾಮನಗೌಡ್ರ, ಮುಖ್ಯೋಪಾದ್ಯಾಯ ಎಚ್.ಬಿ. ಸಣ್ಣಮನಿ, ಎಸ್.ಡಿ. ಲಮಾಣಿ, ಎನ್.ಎ. ಮುಲ್ಲಾ, ಶಿವಪ್ಪ ಇಟ್ಟಿಗೇರಿ ಹಾಗೂ ಎಸ್ಡಿಎಂಸಿ ಸದಸ್ಯರು, ಶಿಕ್ಷಕರು ಸೇರಿ ಅನೇಕರಿದ್ದರು. ಎಸ್.ಎಂ. ತಾಯಮ್ಮನವರ ನಿರೂಪಿಸಿದರು.