ಧಾರವಾಡ: ಹುಬ್ಬಳ್ಳಿ- ಧಾರವಾಡ ಮಧ್ಯೆ ಸ್ಥಾಪಿತ ಬಿಆರ್ಟಿಎಸ್ ವ್ಯವಸ್ಥೆ ಉತ್ತಮ ಯೋಜನೆಯಾದರೂ ಅವಾಂತರಗಳು ಮುಂದುವರಿದಿವೆ. ಅವಳಿ ನಗರದಲ್ಲಿ ಅನುಷ್ಠಾನಗೊಂಡ ರಾಜ್ಯದ ಮೊದಲ ಯೋಜನೆ ಮಳೆಗಾಲದಲ್ಲಿ ಸಾರ್ವಜನಿಕರಿಗೆ ಜಲಗಂಡಾಂತರ ತಂದೊಡ್ಡುತ್ತಿದೆ.
ಅವಳಿನಗರದ ಮಧ್ಯೆ ಬಿಆರ್ಟಿಎಸ್ನ ಸುಸಜ್ಜಿತ ಚಿಗರಿ ಬಸ್ಗಳು ಸಂಚರಿಸುತ್ತಿರುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗಿದೆ. ವಾಯವ್ಯ ಸಾರಿಗೆ ಹಾಗೂ ಖಾಸಗಿ ವಾಹನಗಳ ಅವಲಂಬನೆ ಕಡಿಮೆಯಾಗಿದೆ. ಆದರೆ, ಕಾಮಗಾರಿ ದಶವಾರ್ಷಿಕ ಯೋಜನೆಯಂತೆ ಮುಂದುವರಿದಿದೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಬಿಆರ್ಟಿಎಸ್ನ ಅವೈಜ್ಞಾನಿಕ ಕಾಮಗಾರಿ ಜನರ ಜೀವ ಹಿಂಡುತ್ತಿದೆ. ಸಣ್ಣ ಮಳೆಯಾದರೆ ಸಾಕು, ಇಲ್ಲಿನ ಎನ್ಟಿಟಿಎ್ ಗಣಪತಿ ದೇವಸ್ಥಾನದ ಎದುರಿನ ರಸ್ತೆ ಕೆರೆಯಂತಾಗುತ್ತದೆ. ಎತ್ತರ ಪ್ರದೇಶದಿಂದ ಬರುವ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿ ವ್ಯವಸ್ಥೆ ಇಲ್ಲದಿರುವುದು ಈ ಅದ್ವಾನಕ್ಕೆ ಕಾರಣ. ಅಧಿಕಾರಿಗಳು ಮಳೆಗಾಲಕ್ಕೂ ಪೂರ್ವ ತ್ಯಾಜ್ಯ ವಸ್ತುಗಳನ್ನು ತೆಗೆದು ಚರಂಡಿ ವ್ಯವಸ್ಥೆಯನ್ನು ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ. ಇದೇ ರೀತಿ ಕೆಎಂಎ್ ಎದುರು ಸಹ ಮಳೆ ನೀರು ಸಂಗ್ರಹವಾಗುತ್ತದೆ.
ಗಂಟೆಗಟ್ಟಲೇ ಸಂಚಾರ ಬಂದ್: ಎನ್ಟಿಟಿಎ್ ಹಾಗೂ ಕೆಎಂಎ್ ಎದುರಿನ ರಸ್ತೆಗಳು ಜಲಾವೃತವಾದಾಗ ಅವಳಿನಗರದ ರಸ್ತೆ ಸಂಚಾರ ಗಂಟೆಗಟ್ಟಲೇ ಬಂದ್ ಆಗುತ್ತದೆ. ಹು-ಧಾ ಮಧ್ಯೆ ಸಂಚರಿಸಲು ಬೇರೆ ದಾರಿ ಇಲ್ಲದೆ ವಾಹನ ಸವಾರರು ನಿಂತಲ್ಲೇ ನಿಲ್ಲುವುದು ರೂಢಿಯಾಗಿದೆ. ರಸ್ತೆಯಲ್ಲಿ 3- 4 ಅಡಿ ನೀರು ನಿಲ್ಲುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ಅಪಾಯ ತಪ್ಪಿದ್ದಲ್ಲ.
ತಪ್ಪಿದ ಟೋಲ್ನಾಕಾ ತಾಪತ್ರಯ: ಎನ್ಟಿಟಿಎ್ ಹಾಗೂ ಕೆಎಂಎ್ ಅಲ್ಲದೆ ಟೋಲ್ನಾಕಾ ಬಳಿಯೂ ಪ್ರತಿವರ್ಷ ಮಳೆಗಾಲದಲ್ಲಿ ಜಲಗಂಡಾಂತರ ಎದುರಾಗುತ್ತಿತ್ತು. ಮೇಲ್ಭಾಗದಿಂದ ಹರಿದುಬರುತ್ತಿದ್ದ ಚರಂಡಿಗಳ ತ್ಯಾಜ್ಯ ನಡುರಸ್ತೆಯಲ್ಲಿ ತೇಲುತ್ತಿತ್ತು. ಮೇಲಿಂದ ಮೇಲೆ ಹೀಗಾಗುತ್ತಿದ್ದುದರಿಂದ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿತ್ತು. ಜನ ಅಧಿಕಾರಿಗಳ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ್ದೂ ಉಂಟು. ಕೊನೆಗೂ ಎಚ್ಚೆತ್ತ ಬಿಆರ್ಟಿಎಸ್ ಅಧಿಕಾರಿಗಳು ಟೋಲ್ನಾಕಾ ಬಳಿ ಮಳೆ ನೀರು ಒಂದೆಡೆಯಿಂದ ಮತ್ತೊಂದೆಡೆ ಸಾಗುವ ವ್ಯವಸ್ಥೆ ಮಾಡಿದ್ದರಿಂದ ತಾಪತ್ರಯ ತಪ್ಪಿದೆ.
ಹೀಗಳೆಯುವ ಜನ: ಅವಳಿನಗರ ಮಧ್ಯೆ ಅನುಷ್ಠಾನಗೊಂಡ ಬಿಆರ್ಟಿಎಸ್ ಯೋಜನೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕ್ಕೆ ಗುರಿಯಾಗುತ್ತಲೇ ಇದೆ. ಅಂದಾಜು 1 ಸಾವಿರ ಕೋಟಿ ರೂ. ವೆಚ್ಚದ ಯೋಜನೆಯನ್ನು ಜನ ತೆಗಳುತ್ತಿದ್ದಾರೆ. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದುಹೋಗದಿರುವುದರಿಂದ ರಸ್ತೆಗಳು ಕೆರೆಯಂತಾಗುತ್ತವೆ. ಜಲಾವೃತವಾದ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ೆಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ‘ನಮ್ಮ ಧಾರವಾಡ ನಮ್ಮ ಹೆಮ್ಮೆ’ ಎಂದು ಜನ ಜನಪ್ರತಿನಿಧಿಗಳ ಕಾಲೆಳೆಯುತ್ತಿದ್ದಾರೆ. ಇಂಜಿನಿಯರ್ ದಿನಾಚರಣೆಯಂದು ‘ಬಿಆರ್ಟಿಎಸ್ ಯೋಜನೆಯ ಇಂಜಿನಿಯರ್ಗಳನ್ನು ಹೊರತುಪಡಿಸಿ ಉಳಿದ ಇಂಜಿನಿಯರ್ಗಳಿಗೆ ಶುಭಾಶಯಗಳು’ ಎಂದು ಜನ ಹೀಗಳೆಯುತ್ತಾರೆ.