ಮಂಗಳೂರು: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್ಪಿಎಲ್) ಸಂಸ್ಥೆಯು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಡಿ ಬರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯ ಪ್ರಮುಖ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(ಸಿಎಸ್ಐಆರ್) ಪ್ರಯೋಗಾಲಯದಲ್ಲಿ ಸಹಭಾಗಿತ್ವದ ಸಂಶೋಧನಾ ಹೊಂದಾಣಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.
ಹೈದರಾಬಾದ್ನಲ್ಲಿ ಇತ್ತೀಚೆಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ ಜಿತೇಂದ್ರ ಸಿಂಗ್ ಸಮ್ಮುಖ ಒಡಂಬಡಿಕೆಗೆ ಸಹಿ ಹಾಕಲಾಯಿತು. ಎಂಆರ್ಪಿಎಲ್ನ ನಿರ್ದೇಶಕ ಸಂಜಯ್ ವರ್ಮ, ಸಿಎಸ್ಐಆರ್–ಐಐಸಿಟಿ ನಿರ್ದೇಶಕ ಡಾ.ಡಿ.ಶ್ರೀನಿವಾಸ ರೆಡ್ಡಿ ಉಪಸ್ಥಿತರಿದ್ದರು. ಎಂಆರ್ಪಿಎಲ್ನ ಗ್ರೂಪ್ ಜನರಲ್ ಮ್ಯಾನೇಜರ್ ಎಚ್.ಸಿ. ಸತ್ಯನಾರಾಯಣ, ಐಐಸಿಟಿಯ ಬಿಸಿನೆಸ್ ಡೆವಲಪ್ಮೆಂಟ್ ಅಧ್ಯಕ್ಷೆ ಡಾ. ಡಿ. ಶೈಲಜಾ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಒಪ್ಪಂದದಡಿ ಎಂಆರ್ಪಿಎಲ್ ಮತ್ತು ಐಐಸಿಟಿ ಹಲವಾರು ಪಾಲುದಾರಿಕೆಯ ಸಂಶೋಧನೆ ಮತ್ತು ಅಭಿವೃದ್ಧಿ ವಲಯದಲ್ಲಿ ಕಡಿಮೆ ಮೌಲ್ಯದ ಸಂಸ್ಕರಣಾಗಾರ ಸ್ಟೀಮ್ಗಳ ಮೌಲ್ಯೀಕರಣ, ಸಿಒ2 ಕಾಪ್ಟರ್ ಮತ್ತು ಇತರ ಪರಿವರ್ತನೆ ವಲಯದಲ್ಲಿ ಕೆಲಸ ಮಾಡಲಿದೆ. ಇಂಗಾಲ ಹೊರ ಸೂಸುವಿಕೆ ಕಡಿಮೆ ಮಾಡಲು ಮತ್ತು 2070 ರ ವೇಳೆಗೆ ಈ ವಲಯದಲ್ಲಿ ನಿವ್ವಳ ಶೂನ್ಯ ಗುರಿ ಸಾಧಿಸುವ ಹಿನ್ನೆಲೆಯಲ್ಲಿ ಎಂಆರ್ಪಿಎಲ್ ಹೆಜ್ಜೆ ಇಟ್ಟಿದೆ. ಇಂಗಾಲ ಸಂಗ್ರಹಿಸುವ ಮತ್ತು ಬಳಕೆಗಾಗಿ ಸ್ಪರ್ಧಾತ್ಮಕವಾಗಿ ದೇಶೀಯ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಎಂಆರ್ಪಿಎಲ್ ಒತ್ತು ನೀಡಿದೆ.
ಸುಸ್ಥಿರ ಇಂಧನ ಉತ್ಪಾದನೆ ವಲಯದಲ್ಲಿ ಎಂಆರ್ಪಿಎಲ್ ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದೆ. ಇದರಲ್ಲಿ 60 ಕೆಎಲ್ ಡಿ ಸಾಮರ್ಥ್ಯದ ಫೀಡ್– ಅಗ್ನೆಸ್ಟಿಕ್ 2ಜಿ ಎಥನಾಲ್ ಸ್ಥಾವರವನ್ನು ಸ್ಥಾಪಿಸುತ್ತಿದೆ, ಸಂಸ್ಕರಣೆಯೊಂದಿಗೆ ಸಂಯೋಜಿಸಲ್ಪಟ್ಟ 20 ಕೆಎಲ್ ಪಿಡಿ ಜೈವಿಕ ಎಟಿಎಫ್ನಲ್ಲಿ ದೇಶದಲ್ಲೇ ಮೊದಲ ಸ್ಥಾವರವನ್ನು ಹೊಂದುವ ಪ್ರಕ್ರಿಯೆಯಲ್ಲಿದೆ. ತನ್ನ ಸಂಸ್ಕರಣಾಗಾರದಲ್ಲಿ ಎಂಆರ್ಪಿಎಲ್ ಇತ್ತೀಚೆಗೆ ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯದ ಜತೆ ಜೈವಿಕ –ಎಟಿಎಫ್ ಸ್ಥಾಪನೆ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಪ್ರಕಟಣೆ ತಿಳಿಸಿದೆ.