ತುಮಕೂರು: ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಶ್ರಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ದೇವರಾಯಪಟ್ಟಣದ ದೇವಮೂಲೆಯಿಂದ ನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಚುನಾವಣಾ ಪ್ರಚಾರಕ್ಕೆ ಭರ್ಜರಿ ಚಾಲನೆ ನೀಡಿದರು.
ಸಿದ್ಧಗಂಗಾಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಜ್ಯೋತಿಗಣೇಶ್ ಅವರನ್ನು ಆಶೀರ್ವದಿಸಿದರು. ಬಿಜೆಪಿ ವತಿಯಿಂದ ಆಯೋಜಿಸಿದ್ದ ವಿಜಯ ಸಂಕಲ್ಪ ಅಭಿಯಾನ ಹಾಗೂ ಪ್ರಗತಿ ರಥಕ್ಕೆ ಗುರುವಾರ ಚಾಲನೆ ನೀಡಿದ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್ ಮಾತನಾಡಿ, ರಾಜ್ಯಾದ್ಯಂತ ವಿಜಯ ರಥಯಾತ್ರೆ ನಡೆಯುತ್ತಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ಕೇಂದ್ರ, ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ಮನದಟ್ಟು ಮಾಡಿಕೊಡಲು ಸಂಕಲ್ಪ ಮಾಡಲಾಗಿದೆ. ಎಲ್ಸಿಡಿ ಸ್ಕ್ರೀನ್ ವಾಹನದಲ್ಲಿ ಪ್ರಚಾರ ಕೈಗೊಳ್ಳಲಾಗುವುದಲ್ಲದೆ, ಪ್ರತಿ ಬಡಾವಣೆ, ಮನೆಮನೆಗೆ ತೆರಳಿ ಪಕ್ಷದ ಕರಪತ್ರ ಹಂಚುವ ಜತೆಗೆ, ಪ್ರಣಾಳಿಕೆಗೆ ಅಗತ್ಯ ಸಲಹೆ, ಸೂಚನೆಗಳನ್ನು ಕಾರ್ಯಕರ್ತರು ಪಡೆಯುವರು ಎಂದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಚಾಮರಾಜನಗರ ಜಿಲ್ಲೆ ಮಲೆ ಮಹದೇಶ್ವರ ದೇವಾಲಯದ ಆವರಣದಲ್ಲಿ ವಿಜಯ ಸಂಕಲ್ಪ ಮತ್ತು ವಿಜಯರಥಯಾತ್ರೆಗೆ ಚಾಲನೆ ನೀಡಿದ್ದಾರೆ. ನಾವು ಕೂಡ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ರಥಯಾತ್ರೆ ಆ
ಯೋಜಿಸಿದ್ದೇವೆ. ಚುನಾವಣೆ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನೋಪಯೋಗಿ ಯೋಜನೆಗಳ ಮಾಹಿತಿಯನ್ನು ಮತದಾರರಿಗೆ ತಲಪಿಸಲಾಗುವುದು ಎಂದು ಹೇಳಿದರು.
ದೇವಮೂಲೆಯಿಂದ ಆರಂಭ: ಸಿದ್ಧಗಂಗೆಯ ಶಿವಕುಮಾರ ಶ್ರೀಗಳು ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ನಗರದ ದೇವಮೂಲೆ ದೇವರಾಯಪಟ್ಟಣದಿಂದ ವಿಜಯ ರಥಯಾತ್ರೆ ಆರಂಭವಾಗಿದೆ. ಮೊದಲ ದಿನ 35ನೇ ವಾರ್ಡಿನಲ್ಲಿ ಸರ್ಕಾರದ ಸಾಧನೆಗಳನ್ನು ಹೊತ್ತ ರಥವು ಸಂಚರಿಸಲಿದ್ದು, ಮುಂದಿನ 25 ದಿನಗಳಲ್ಲಿ ನಗರದ ಎಲ್ಲ ವಾರ್ಡ್ಗಳ ಪ್ರತೀ ಬೂತ್ ಮಟ್ಟದಲ್ಲೂ ರಥಯಾತ್ರೆ ತಲುಪಲಿದೆ ಎಂದು ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.
ಮಾ.1ರಂದು ರಾಜ್ಯದ ನಾಲ್ಕು ಮೂಲೆಗಳಿಂದ ವಿಜಯ ರಥಯಾತ್ರೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ರಾಜನಾಥಸಿಂಗ್, ಅಮಿತ್ ಷಾ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿಎಂ ಬಸವರಾಜು ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಇದು ಯಾವುದೇ ವೈಯುಕ್ತಿಕ ಅಜೆಂಡಾ ಅಲ್ಲ. ಎಲ್ಲವೂ ಪಕ್ಷದ ಕಾರ್ಯಕ್ರಮ ಎಂದು ಸ್ಪಷ್ಟಪಡಿಸಿದರು.
ಭರ್ಜರಿ ಪ್ರಚಾರ: ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿರುವುದು ವಿಶೇಷವಾಗಿದೆ. ಕಾಂಗ್ರೆಸ್, ಜೆಡಿಎಸ್ ಪ್ರಜಾಧ್ವನಿ, ಪಂಚರತ್ನ ಯಾತ್ರೆ ಬಳಿಕ ಸದ್ದಿಲ್ಲದಂತಾಗಿದ್ದು, ಬಿಜೆಪಿ ನಗರ ಮಂಡಲವು ಪ್ರಚಾರಕ್ಕೆ ಚಾಲನೆ ನೀಡಿದೆ. ದೇವರಾಯಪಟ್ಟಣದ ದೇವಮೂಲೆಯಾದ ಸಿದ್ದಿವಿನಾಯಕ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಗತಿ ರಥ ಯಾತ್ರೆಯೊಂದಿಗೆ ಪ್ರಚಾರ ಆರಂಭಿಸಲಾಯಿತು. ನಗರ ಮಂಡಲ ಅಧ್ಯಕ್ಷ ಟಿ.ಎಚ್.ಹನುಮಂತರಾಜು, ಪಾಲಿಕೆ ಪ್ರತಿಪಕ್ಷ ನಾಯಕ ವಿಷ್ಣುವರ್ಧನ್, ಸದಸ್ಯರಾದ ಬಿ.ಜಿ.ಕೃಷ್ಣಪ್ಪ, ಎಚ್.ಮಲ್ಲಿಕಾರ್ಜುನಯ್ಯ, ನಳಿನಾ, ದೀಪಶ್ರೀ, ನವೀನಾ, ಶಶಿಕಲಾ, ಚಂದ್ರಕಲಾ, ನಗರಸಭೆ ಮಾಜಿ ಸದಸ್ಯ ಡಿ.ಆರ್.ಬಸವರಾಜು, ಯುವಮೋರ್ಚಾ ಕಾರ್ಯಕರ್ತರು, ಪಕ್ಷದ ಮುಖಂಡರು ಇದ್ದರು.
ಸೊಗಡು ಆಟ ಶುರು: ಬಿಜೆಪಿ ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದಂತೆ ಮಾಜಿ ಸಚಿವ ಸೊಗಡುಶಿವಣ್ಣ ಆಟ ಶುರುವಿಟ್ಟುಕೊಂಡಿದ್ದಾರೆ. ಸೊಗಡು ತಮ್ಮ ಬೆಂಬಲಿಗರೊಂದಿಗೆ ಗುರುವಾರ ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ ನಂತರ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದು ಅಖಾಡಕ್ಕೆ ಧುಮುಕಿದ್ದಾರೆ. ಅಭಿಮಾನಿಗಳು, ಬೆರಳೆಣಿಕೆ ಹಿತೈಷಿಗಳೊಂದಿಗೆ ಪ್ರಚಾರ ಕಾರ್ಯ ಆರಂಭಿಸಿದ ಸೊಗಡುಶಿವಣ್ಣ, ಮಹಾತ್ಮರ ಸನ್ನಿಧಿಯಿಂದ ಒಳ್ಳೆಯ ಕೆಲಸ ಆರಂಭಿಸುವುದು ವಾಡಿಕೆ. ನಾನು ಶ್ರೀಕ್ಷೇತ್ರದ ಭಕ್ತ. ಹಾಗಾಗಿ, ಯಾವುದೇ ಒಂದು ಒಳ್ಳೆಯ ಕೆಲಸ ಮಾಡುವಾಗ ಇಲ್ಲಿಂದಲೇ ಶುರು ಮಾಡುವುದು ನನ್ನ ಪದ್ಧತಿ. 1994ರಿಂದ ನಾನು ತುಮಕೂರು ನಗರ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಇಂದಿನಿಂದ ಅವರ ಮನೆ ಬಾಗಿಲಿಗೆ ತೆರಳಿ ಮಾಡುತ್ತೇವೆ. ಕ್ಷೇತ್ರದ ಜನರಿಂದಲೇ ನನಗೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಬರುತ್ತಿದ್ದು, ಇದರಲ್ಲಿ ಯಾವುದೇ ಗೊಂದಲ ಮೂಡುವ ಪ್ರಶ್ನೆಯೇ ಇಲ್ಲ ಎಂದರು. ಧನಿಯಾಕುಮಾರ್, ಶಬ್ಬೀರ್ ಅಹಮದ್, ಸುಜಾತ ಚಂದ್ರಶೇಖರ್, ರಮೇಶ್ ಆಚಾರ್, ಲಕ್ಷ್ಮೀಶ್, ಕುಮಾರಸ್ವಾಮಿ, ಆಟೋ ನವೀನ್, ಜೈಪ್ರಕಾಶ್, ಚೌಡಪ್ಪ, ಬನಶಂಕರಿ ಬಾಬು, ಲಾಯರ್ ಮಹದೇವ ಇದ್ದರು.