ಎನ್.ಆರ್.ಪುರ: ಭಾರತದ ಸಾಂಬಾರು ಬೆಳೆಗಳಿಗೆ ಹೆಚ್ಚು ಬೇಡಿಕೆ ಇದ್ದು ರೈತರು ತಮ್ಮ ತೋಟಗಳಲ್ಲಿ ಅಡಕೆ ಜತೆಗೆ ಸಾಂಬಾರು ಬೆಳೆ ಬೆಳೆಯಬೇಕು ಎಂದು ತುಮಕೂರು ಗಾಂಧೀಜಿ ಸಹಜ ಬೇಸಾಯ ಆಶ್ರಮದ ಕೃಷಿ ವಿಜ್ಞಾನಿ ಡಾ.ಮಂಜುನಾಥ್ ಸಲಹೆ ನೀಡಿದರು.
ಅವರು ಸೋಮವಾರ ತಾಲೂಕಿನ ಕೋಗಳ್ಳಿ ಹೆಗ್ಗಾರುಕೊಡಿಗೆ ಎಸ್ಟೇಟ್ನಲ್ಲಿ ನಡೆದ ಭೂಮಿ ಉಳಿಸೋಣ ಕಾರ್ಯಕ್ರಮದಲ್ಲಿ ಸಾವಯವ ಕೃಷಿ ಬಗ್ಗೆ ರೈತರೊಂದಿಗೆ ಸಂವಾದ ನಡೆಸಿದರು. ರೈತರು ಪ್ರಸ್ತುತ ಆಹಾರ ಬೆಳೆಯಿಂದ ತೋಟಗಾರಿಕೆ ಬೆಳೆಯತ್ತ ಮುಖ ಮಾಡಿದ್ದಾರೆ. ಕೇಂದ್ರ ಸರ್ಕಾರ ಅಡಕೆ ಆಮದಿಗೆ ಬೂತಾನ್, ಶ್ರೀಲಂಕಾದ ಜತೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಅಡಕೆಗೆ ಉತ್ತಮ ಭವಿಷ್ಯವಿಲ್ಲ. ಹೀಗಾಗಿ ರೈತರು ಅಡಕೆ ಜತೆ ಸಾಂಬಾರು ಬೆಳೆಗಳಾದ ಜಾಯಿಕಾಯಿ, ಕಾಳುಮೆಣಸು, ಲವಂಗ ಮುಂತಾದ ಬೆಳೆ ಬೆಳೆಯಬೇಕು ಎಂದರು.
ಮೂಡಿಗೆರೆಯ ವೈಭವ್, ಕಾಫಿಗಿಡ ರೋಗಬಾಧೆಗಳ ಬಗ್ಗೆ ಮಾಹಿತಿ ನೀಡಿದರು. ಅನಘ್ಯ ಕಾರ್ಯಕ್ರಮ ಉದ್ಘಾಟಿಸಿದರು. ಹೆಗ್ಗಾರು ಕೊಡಿಗೆ ಎಸ್ಟೇಟ್ ಮಾಲೀಕ ಎಚ್.ಆದರ್ಶ, ಸಾವಯವ ಕೃಷಿಕ ಮಡಬೂರು ಕೃಷ್ಣಪ್ಪಗೌಡರು, ಪ್ರಗತಿಪರ ಕೃಷಿಕ ಹಾಲಪ್ಪಗೌಡ, ಶ್ರೀನಿವಾಸಗೌಡ, ವೇಣುಗೋಪಾಲ, ಶ್ರೀಕಾಂತ, ಶ್ರುತಿ ಆದರ್ಶ, ಗಿರಿರಾಜ್ ಇದ್ದರು.