ಸೊರಬ: ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು ಅಲ್ಲಲ್ಲಿ ತುಂತುರು ಮಳೆಯಾಗಿದೆ. ಸೋಮವಾರದ ಬೆಳಗ್ಗೆವರೆಗೆ ತಾಲೂಕಿನಲ್ಲಿ 2 ಮಿ.ಮೀ. ಮಳೆ ದಾಖಲಾಗಿದೆ. ಚಂಡಮಾರುತದ ಪರಿಣಾಮ ಮಳೆ ಆಗಲಿದೆ ಎಂಬ ಮುನ್ಸೂಚನೆ ದಿನಪತ್ರಿಕೆಗಳಲ್ಲಿ ಮೊದಲೇ ನೀಡಿದ್ದರಿಂದ ರೈತರು ಎಚ್ಚೆತ್ತುಕೊಂಡು ಭತ್ತದ ಕಟಾವಿಗೆ ಮುಂದಾಗಾದ ಕಾರಣ ತಾಲೂಕಿನಲ್ಲಿ ಮಳೆಗೆ ಕಟಾವಾದ ಭತ್ತದ ಬೆಳೆ ಅಷ್ಟಾಗಿ ಸಿಲುಕಿಲ್ಲ. ಆದರೂ ಕೆಲವು ರೈತರು ಮೋಡ ಕವಿದ ವಾತಾವರಣ ಮುಂದುವರಿದು ಹಾಗೇ ಹೋಗಬಹುದೆಂದು ತಿಳಿದು ಕಟಾವು ಮಾಡಿ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಈಗಾಗಲೇ ಕೆಲವು ಕಟಾವು ಮಾಡಿ ಬಣವೆ ಹಾಕಿದ್ದಾರೆ. ಒಕ್ಕಲು ಮಾಡಿದ ಕೆಲವು ರೈತರ ಭತ್ತ ಕಣದಲ್ಲಿ ಮಳೆಗೆ ಸಿಲುಕಿದ್ದು ರಾಶಿಗೆ ಟಾರ್ಪಲ್ ಮುಚ್ಚುತ್ತಿದ್ದಾರೆ. ಅಲ್ಲದೆ ಕಟಾವು ಮಾಡಿದ ಜೋಳದ ರಾಶಿಯನ್ನು ಕೂಡ ಮಳೆಯಿಂದ ರಕ್ಷಿಸಲು ಟಾರ್ಪಲ್ ಮೊರೆ ಹೋಗಿದ್ದಾರೆ. ಇನ್ನೂ ಅಡಕೆಗೆ ಬೆಲೆ ಇಲ್ಲದೆ ಖೇಣಿ ಕೇಳುವವರು ಇಲ್ಲದೆ ಮರದಲ್ಲೇ ಹಣ್ಣು ಒಣಗುತ್ತಿವೆ.