ಅಳವಂಡಿ: ಮಠ ಮಂದಿರಗಳಿಗೆ ಭಕ್ತರೇ ಆಧಾರ ಸ್ತಂಭ. ಎಲ್ಲರ ಸಹಕಾರದಿಂದ ಮಠ ಮಾನ್ಯಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅಳವಂಡಿ ಸಿದ್ಧೇಶ್ವರ ಮಠದ ಮರುಳಾರಾಧ್ಯ ಶಿವಾಚಾರ್ಯರು ತಿಳಿಸಿದರು. ಶ್ರೀ ಸಿದ್ಧೇಶ್ವರ ಜಾತ್ರೋತ್ಸವ ನಿಮಿತ್ತ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಭಗವಂತನ ದೃಷ್ಟಿಯಲ್ಲಿ ಎಲ್ಲ ಜೀವರಾಶಿ ಒಂದೇ. ಇಲ್ಲಿ ಭೇದ-ಭಾವ ಇಲ್ಲ. ಸಮಾಜದ ಒಳಿತಿಗಾಗಿ ದಾನ ನೀಡುವ ಗುಣ ಬೆಳೆಸಿಕೊಳ್ಳಬೇಕು. ಶರಣರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ಸುಂದರ ಬದುಕು ಕಟ್ಟಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಜತೆ ಸಂಸ್ಕಾರ ಕಲಿಸಬೇಕು ಎಂದು ಸಲಹೆ ನೀಡಿದರು. ಮುಖಂಡ ಅಶೋಕ ಬಂಡಿ ಮಾತನಾಡಿ, ಭಕ್ತರು ಜಾತ್ರೆಗೆ ಆಗಮಿಸಿ ಸಿದ್ಧೇಶ್ವರನ ಕೃಪೆಗೆ ಪಾತ್ರರಾಗಬೇಕು. ಈ ವರ್ಷವೂ ಸಾಮೂಹಿಕ ವಿವಾಹ, ಅಯ್ಯಚಾರ, ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಭೆ, ಅಡ್ಡಪಲ್ಲಕ್ಕಿ ಮಹೋತ್ಸವ, ಮದ್ದು ಸುಡುವುದು, ಕಡುಬಿನ ಕಾಳಗ, ರಥೋತ್ಸವ ನಡೆಯಲಿದ್ದು, ಭಕ್ತರು ಸಹಕಾರ ನೀಡಬೇಕೆಂದರು.
ಪ್ರಮುಖರಾದ ಗಿರೀಶ ಕಣವಿ, ಸಿದ್ದಣ್ಣ ಕೋರಿಶೆಟ್ಟರ, ಬಸಣ್ಣ ತುಬಾಕಿ, ರಾಚಯ್ಯ ಶರಭಯ್ಯನಮಠ, ಅಂದಯ್ಯ ಹಿರೇಮಠ, ಗುರಪ್ಪ, ಚಿಕ್ಕವೀರಪ್ಪ ಕವಡಿಮಟ್ಟಿ, ಶೇಖರಪ್ಪ ಭಾವಿ, ಸುರೇಶ, ಮಲ್ಲಪ್ಪ ಜೋಗಿನ, ಫಕೀರಸಾಬ್, ವೀರಣ್ಣ, ರುದ್ರಪ್ಪ, ಕನಕಪ್ಪ, ಅಂದಪ್ಪ, ರವಿ ಇತರರಿದ್ದರು.