ರಾಯಚೂರು: ಜಿಲ್ಲೆಗೆ ಏಮ್ಸ್ ತರಲು ಆಸಕ್ತಿ ತೋರದ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ, ಭಾಷಣದಲ್ಲಿ ಸವಾಲುಗಳನ್ನು ಹಾಕುತ್ತ ಸವಾಲುಗಳ ವೀರರಾಗಿದ್ದಾರೆಂದು ಏಮ್ಸ್ ಹೋರಾಟ ಸಮಿತಿ ಸಂಚಾಲಕ ಬಸವರಾಜ ಕಳಸ ವ್ಯಂಗ್ಯವಾಡಿದರು.
ಜಿಲ್ಲೆಗೆ ಏಮ್ಸ್ ನೀಡುವುದಾಗಿ ಸುಳ್ಳು ಆಶ್ವಾಸನೆ ನೀಡಿ ಮತ ಗಿಟ್ಟಿಸಿಕೊಂಡು ಲೋಕಸಭೆಯಲ್ಲಿ ರಾಜಾ ಅಮರೇಶ್ವರ ನಾಯಕರನ್ನು ಗೆಲ್ಲಿಸಿ, ಶಿವನಗೌಡ ನಾಯಕ ಇದೀಗ ಏಮ್ಸ್ ವಿಚಾರವನ್ನು ಭಾಷಣಕ್ಕಷ್ಟೇ ಸೀಮಿತಗೊಳಿಸಿದ್ದಾರೆ. ಈ ಹಿಂದೆ ಐಐಟಿ ನೀಡದೇ ಸರ್ಕಾರ ಜಿಲ್ಲೆಗೆ ಅನ್ಯಾಯ ಮಾಡಿದೆ. ಇದೀಗ ಜಿಲ್ಲೆಗೆ ಏಮ್ಸ್ ನೀಡದೇ ನಿರ್ಲಕ್ಷಿಸಿದೆ. ಜತೆಗೆ ಇಲ್ಲಿನ ಶಾಸಕರೂ ತಮ್ಮ ಇಚ್ಛಾಶಕ್ತಿ ತೋರಿಸುತ್ತಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಅ.16ಕ್ಕೆ ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾದಲ್ಲಿ ಕಂದಾಯ ಸಚಿವರು ಗ್ರಾಮ ವಾಸ್ತವ್ಯದ ನೆಪದಲ್ಲಿ ವೋಟು ಗಿಟ್ಟಿಸಿಕೊಳ್ಳಲು ಆಗಮಿಸುತ್ತಿದ್ದು, ಅಂದು ಅವರನ್ನು ಮುತ್ತಿಗೆ ಹಾಕಲಾಗುವುದು. ತಾಕತ್ತಿದ್ದರೆ ಶಿವನಗೌಡ ನಾಯಕ ಏಮ್ಸ್ ಹೋರಾಟ ಸಮಿತಿಯನ್ನು ತಡೆಯಲಿ ಎಂದು ಸವಾಲು ಹಾಕಿದರು.
ರೈತ ಸಂಘ ಹಾಗೂ ಹಸಿರು ಸೇನೆಯ ಮಹಿಳಾ ಜಿಲ್ಲಾಧ್ಯಕ್ಷೆ ರೂಪಾ ಶ್ರೀನಿವಾಸ ನಾಯಕ, ಹೋರಾಟ ಸಮಿತಿ ಸಂಚಾಲಕರಾದ ಅಶೋಕ ಕುಮಾರ ಜೈನ್, ಮಿಮಿಕ್ರಿ ಬಸವರಾಜ, ಚಾಂದ್ಪಾಷಾ, ಎಂ.ಆರ್.ಭೇರಿ, ಜಾನ್ವೆಸ್ಲಿ ಇದ್ದರು.