ನವದೆಹಲಿ: ಕುಸ್ತಿಪಟು ಸಾಗರ್ ರಾಣ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ 6 ದಿನಗಳ ಪೊಲೀಸ್ ಕಸ್ಟಡಿಯಲ್ಲಿರುವ ಒಲಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್, ತನ್ನ ಸ್ನೇಹಿತರೊಂದಿಗೆ ಸೇರಿ ಸಾಗರ್ಗೆ ಥಳಿಸುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತೀವ್ರ ಥಳಿತಕ್ಕೆ ಒಳಗಾದ ಕುಸ್ತಿಪಟು ಸಾಗರ್, ಗಂಭೀರ ಗಾಯದಿಂದ ನೆಲದ ಮೇಲೆಯೇ ನರಳಾಡಿ ಪ್ರಾಣ ಬಿಟ್ಟಿರುವುದಾಗಿ ತಿಳಿದುಬಂದಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶೀಲ್ನನ್ನು ಕಳೆದ ವಾರ ಪೊಲೀಸರು ಬಂಧಿಸಿದ್ದಾರೆ. ನಗರದಲ್ಲಿ ಕುಸ್ತಿ ಸಮುದಾಯವನ್ನು ಭಯಭೀತಗೊಳಿಸಲು ಈ ಘಟನೆಯ ವಿಡಿಯೋವನ್ನು ಸ್ನೇಹಿತನಿಂದ ರೆಕಾರ್ಡ್ ಮಾಡಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಸುಶೀಲ್ ಕುಮಾರ್ ಮತ್ತು ಆತನ ಸ್ನೇಹಿತರು ಮೇ 4ರಂದು ಸಾಗರ್ ಧನಕರ್ ಮತ್ತ ಆತನ ಸ್ನೇಹಿತರಿಬ್ಬರ ಮೇಲೆ ದೆಹಲಿಯ ಛತ್ರಸಾಲ್ ಸ್ಟೇಡಿಯಂನಲ್ಲಿ ಹಲ್ಲೆ ಮಾಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದರು. ಗಾಯಗೊಂಡ ಮೂವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸಾಗರ್ ಮೃತಪಟ್ಟಿದ್ದಾರೆ.
ಪೊಲೀಸ್ ಬಂಧನದಿಂದ ರಕ್ಷಿಸಿಕೊಳ್ಳಲು ಮೇ 18ರಂದು ಸುಶೀಲ್ ಕುಮಾರ್ ದೆಹಲಿ ಕೋರ್ಟ್ ಮೆಟ್ಟಲೇರಿದ್ದರು. ನನ್ನ ವಿರುದ್ಧದ ತನಿಖೆ ಪಕ್ಷಪಾತವಾಗಿದೆ ಮತ್ತು ಸಂತ್ರಸ್ತನಿಗಾದ ಯಾವುದೇ ಗಾಯಗಳಿಗೂ ನನಗೂ ಸಂಬಂಧವಿಲ್ಲ ಎಂದು ಸುಶೀಲ್ ವಾದಿಸಿದ್ದರು. ಆದರೆ, ಪ್ರಕರಣದ ಗಂಭೀರತೆ ಅರಿತ ನ್ಯಾಯಾಲಯ ನಿರೀಕ್ಷಣಾ ಜಾಮೀನನ್ನು ವಜಾಗೊಳಿಸಿತು. ಇದೀಗ ಬಂಧನಕ್ಕೆ ಒಳಗಾಗಿರುವ ಸುಶೀಲ್ ಕುಮಾರ್ ವಿಚಾರಣೆ ನಡೆಯುತ್ತಿದೆ.
ಅಂದಹಾಗೆ ಸುಶೀಲ್ 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಮತ್ತು 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಬೆಳ್ಳಿಯ ಪದಕವನ್ನು ಜಯಿಸಿದ್ದಾರೆ. (ಏಜೆನ್ಸೀಸ್)
ಬಿ-ಟೀಮ್ ತಿರುಗುಬಾಣ: ನಾಯಕತ್ವ ಬದಲಾವಣೆಗೆ ಯೋಗೇಶ್ವರ್ ಏಕಾಂಗಿ ಹೋರಾಟ