ಕಾರವಾರ: ಕಳೆದ ಎರಡು ದಿನಗಳಿಂದ ಜಿಲ್ಲೆಯ ಕರಾವಳಿಯನ್ನು ತಲ್ಲಣಗೊಳಿಸಿದ್ದ ತೌಕ್ತೆ ಚಂಡ ಮಾರುತದ ಅಬ್ಬರ ತಗ್ಗಿದೆ. ಸೋಮವಾರ ಬೆಳಗಿನಿಂದ ಬಿಸಿಲಿನ ವಾತಾವರಣ ಕಾಣಿಸಿಕೊಂಡಿದೆ. ಆಗಾಗ ಮಳೆಯಾಗುತ್ತಿದೆ. ಬಿರುಗಾಳಿಯ ಅಬ್ಬರವೂ ಕಡಿಮೆಯಾಗಿದೆ. ವಿವಿಧೆಡೆ ತುಂಬಿದ್ದ ನೀರು ನಿಧಾನವಾಗಿ ಇಳಿದು ಹೋಗಿದೆ. ಚಂಡ ಮಾರುತ ಹಾಗೂ ಮಳೆಯಿಂದ ಉಂಟಾದ ಹಾನಿಯ ಲೆಕ್ಕಾಚಾರ ಶುರುವಾಗಿದೆ.
ಇನ್ನೂ ಎರಡು ದಿನ ವರ್ಷಧಾರೆೆ:
ಜಿಲ್ಲೆಯಲ್ಲಿ ತೌಕ್ತೆ ಅಬ್ಬರ ತಗ್ಗಿದ್ದರೂ ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮೇ 18 ಹಾಗೂ 19ರಂದು 64ರಿಂದ 115 ಮಿಮೀವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಯೆಲ್ಲೋ ಅಲರ್ಟ್ ಘೊಷಿಸಲಾಗಿದೆ.
ಹೆಸ್ಕಾಂ ಸಿಬ್ಬಂದಿ ಹರಸಾಹಸ: ಕಾರವಾರ ನಗರ ಹಾಗೂ ಕೆಲ ಗ್ರಾಮೀಣ ಭಾಗಗಳಿಗೆ ಸತತ ಎರಡನೇ ದಿನವೂ ವಿದ್ಯುತ್ ಸಂಪರ್ಕ ದೊರಕಿಲ್ಲ. ನಗರದಲ್ಲಿ 14 ವಿದ್ಯುತ್ ಪರಿವರ್ತಕಗಳು, 213 ಕಂಬಗಳಿಗೆ ಹಾನಿಯಾಗಿದೆ. ಸುಮಾರು 35 ಲಕ್ಷ ರೂ. ಹಾನಿಯಾಗಿರಬಹುದು ಎಂದು ಹೆಸ್ಕಾಂ ಇಇ ರೋಶನಿ ಮಾಹಿತಿ ನೀಡಿದ್ದಾರೆ. ಹೆಸ್ಕಾಂ ಸಿಬ್ಬಂದಿ ಹಾಗೂ ಗುತ್ತಿಗೆ ಸಿಬ್ಬಂದಿ ಸಹಕಾರದಲ್ಲಿ ವಿದ್ಯುತ್ ಸಂಪರ್ಕ ಸರಿಪಡಿಸಲು ಗಾಳಿ, ಮಳೆಯ ನಡುವೆಯೂ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆದರೆ, ಅಪಾರ ಹಾನಿ ಸಂಭವಿಸಿದಲ್ಲಿ ಇನ್ನೂ ವಿದ್ಯುತ್ ನೀಡಲು ಸಾಧ್ಯವಾಗಿಲ್ಲ. ಮೇ 18ರ ಹೊತ್ತಿಗೆ ಎಲ್ಲೆಡೆ ವಿದ್ಯುತ್ ಸಂಪರ್ಕ ಸರಿಪಡಿಸುವ ಪ್ರಯತ್ನ ನಡೆಸಲಾಗಿದೆ ಎಂದು ರೋಶನಿ ಪೆಡ್ನೇಕರ್ ತಿಳಿಸಿದ್ದಾರೆ. ಬೈತಖೋಲ, ಅಮದಳ್ಳಿ, ವೈಲವಾಡ, ಮಲ್ಲಾಪುರದ ಕೆಲ ಭಾಗ ಕಾರವಾರ ನಗರದ ಹಬ್ಬುವಾಡ, ಮುರಳೀಧರ ಮಠ, ಹೈಚರ್ಚ್ ರಸ್ತೆ ಸೇರಿ ವಿವಿಧ ಪ್ರದೇಶಗಳಿಗೆ ಸೋಮವಾರ ಸಂಜೆಯವರೆಗೂ ವಿದ್ಯುತ್ ಸಂಪರ್ಕ ದೊರಕಿರಲಿಲ್ಲ.
ಯಲ್ಲಾಪುರ: ಭಾನುವಾರ ಸುರಿದ ಮಳೆಗೆ ಬೇಡಸಗದ್ದೆಯ ಗಣೇಶ ಹುಕ್ಕಲ್ಲಕರ್ ಅವರ ಮನೆಯ ಮೇಲ್ಛಾವಣಿ ಕುಸಿದು ಹಾನಿಯಾಗಿದೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.