ಗೋಣಿಕೊಪ್ಪ: 17 ವರ್ಷದೊಳಗಿನ ಬಾಲಕರ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ತಂಡದ ಎಲ್ಲ ವಿದ್ಯಾರ್ಥಿಗಳು ಕೊಡಗಿನಿಂದ ಆಯ್ಕೆಗೊಂಡಿರುವ ಬೆನ್ನಲ್ಲೇ, ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿರುವ 14 ವರ್ಷದೊಳಗಿನ ಬಾಲಕರ ಕರ್ನಾಟಕ ರಾಜ್ಯ ಹಾಕಿ ತಂಡದಲ್ಲೂ ಕೊಡಗಿನ 9 ವಿದ್ಯಾರ್ಥಿಗಳು ಸ್ಥಾನ ಪಡೆದುಕೊಂಡಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಡಿ.28ರಿಂದ ಜ.1ರವರೆಗೆ ಆಯೋಜಿಸಿರುವ 14 ವರ್ಷದೊಳಗಿನ ಬಾಲಕರ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಈ ತಂಡ ಕರ್ನಾಟಕವನ್ನು ಪ್ರತಿನಿಧಿಸಲಿದೆ.
ಕರ್ನಾಟಕವನ್ನು ಪ್ರತಿನಿಧಿಸಲಿರುವ ತಂಡದಲ್ಲಿ ಗೋಣಿಕೊಪ್ಪ ಲಯನ್ಸ್ ಶಾಲೆಯ 6 ವಿದ್ಯಾರ್ಥಿಗಳು ಸೇರಿದಂತೆ ಕೊಡಗಿನ ಒಟ್ಟು 9 ವಿದ್ಯಾರ್ಥಿಗಳನ್ನು ಒಳಗೊಂಡ ಈ ತಂಡ ಈಗಾಗಲೇ ಗ್ವಾಲಿಯರ್ ನಗರಕ್ಕೆ ಪ್ರಯಾಣ ಬೆಳೆಸಿದೆ. ಮೈಸೂರು ವಿಭಾಗ ಮಟ್ಟದ 14 ವರ್ಷದೊಳಗಿನ ಬಾಲಕರ ಹಾಕಿ ಪಂದ್ಯಾವಳಿಯಲ್ಲಿ ಹಾಸನ ತಂಡವನ್ನು ಮಣಿಸುವ ಮೂಲಕ ಪ್ರಥಮ ಸ್ಥಾನ ಪಡೆದ ಕೊಡಗು ತಂಡ, ಕಳೆದ ಅಕ್ಟೋಬರ್ 9ರಿಂದ 11ರವರೆಗೆ ಕೂಡಿಗೆಯಲ್ಲಿ ನಡೆದ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿಯೂ ಬಳ್ಳಾರಿ ತಂಡವನ್ನು ಪರಾಭವಗೊಳಿಸುವ ಮೂಲಕ ವಿಜಯಿಯಾಗಿ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿತ್ತು.
ಗೋಣಿಕೊಪ್ಪ ಲಯನ್ಸ್ ಶಾಲೆ ವಿದ್ಯಾರ್ಥಿಗಳಾದ ಬಿ.ಪಿ.ಸಂಚಯ್ ತಮ್ಮಯ್ಯ, ಸಿ.ಟಿ.ಉತ್ಸವ್ ಉತ್ತಪ್ಪ, ಸಿ.ಟಿ.ಉತ್ಕರ್ಷ ಉತ್ತಯ್ಯ, ಸಾರ್ಥಕ್ ಬೆಳ್ಳಿಯಪ್ಪ(ಗೋಲ್ ಕೀಪರ್), ಎ.ಜೆ.ಪ್ರಕುಲ್ ಗಣಪತಿ ಮತ್ತು ಸಿ.ಬಿ.ಅಯಾನ್ ಅಯ್ಯಪ್ಪ, ಪೊನ್ನಂಪೇಟೆ ಸಂತ ಅಂತೋಣಿ ಶಾಲೆಯ ವಿದ್ಯಾರ್ಥಿಗಳಾದ ನಾಚಪ್ಪ, ಬೋಪಣ್ಣ ಹಾಗೂ ಮಡಿಕೇರಿಯ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಪ್ರೀತಮ್ ಕರ್ನಾಟಕವನ್ನು ಪ್ರತಿನಿಧಿಸಲಿರುವ ತಂಡದಲ್ಲಿದ್ದಾರೆ.