ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪಡಿತರ ಅಕ್ಕಿ ಜಪ್ತಿ ಮಾಡಿ, ಐವರನ್ನು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಇಲ್ಲಿನ ಅಮರಗೋಳ ಎಪಿಎಂಸಿ ಯಾರ್ಡ್ನಲ್ಲಿರುವ ದಾಸ್ತಾನು ಮಳಿಗೆ ಮೇಲೆ ದಾಳಿ ಮಾಡಿರುವ ಸಿಸಿಬಿ ಎಸಿಪಿ ನಾರಾಯಣ ಬರಮನಿ ನೇತೃತ್ವದ ತಂಡ, ಒಂಬತ್ತು ಲಕ್ಷ ರೂ. ಮೌಲ್ಯದ ಅಕ್ಕಿ ಹಾಗೂ ನಾಲ್ಕು ವಾಹನಗಳನ್ನು ಜಪ್ತಿ ಮಾಡಿದೆ.
ಬಿಪಿಎಲ್ ಕಾರ್ಡ್ದಾರರಿಗೆ ಉಚಿತವಾಗಿ ಪೂರೈಸುವ ಪಡಿತರ ಅಕ್ಕಿಯನ್ನು 10ರಿಂದ 15 ರೂ. ಬೆಲೆಗೆ ಷಣ್ಮುಖಪ್ಪ ಚನ್ನಪ್ಪ ಬೆಟಗೇರಿ, ಸಾರ್ವಜನಿಕರಿಂದ ಖರೀದಿಸಿ, ಮಂಜುನಾಥ ಹರ್ಲಾಪುರ ಎನ್ನುವರಿಗೆ ಮಾರಾಟ ಮಾಡುತ್ತಿದ್ದ.
ಮಂಜುನಾಥ ಹರ್ಲಾಪುರ ಸುಮಾರು 35ರಿಂದ 40 ರೂ. ಬೆಲೆಗೆ ಮಾಹಾರಾಷ್ಟ್ರಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿದ್ದ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದ್ದು ಬಂದಿದೆ. ನಾಲ್ಕು ವಾಹನಗಳ ಸಮೇತ ಐವರನ್ನು ಬಂಧಿಸಿ ಹುಬ್ಬಳ್ಳಿ ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಇನ್ಸಪೆಕ್ಟರ್ ಬಾಳಪ್ಪ ಮಂಟೂರ ತಂಡ ತನಿಖೆ ಕೈಗೊಂಡಿದೆ.