ಬಾಗಲಕೋಟೆ: ನಗರದ ಹಾಲಮ್ಮ ಕೆರೂಡಿ ಕ್ಯಾನ್ಸರ್ ಮತ್ತು ಹೃದಯರೋಗ ಆಸ್ಪತ್ರೆಯ 7ನೇ ವಾರ್ಷಿಕೋತ್ಸವ ನಿಮಿತ್ತ ಶನಿವಾರ ಉಚಿತ ಕ್ಯಾನ್ಸರ್ ಮತ್ತು ಹೃದಯರೋಗ ಚಿಕಿತ್ಸೆ ಮತ್ತು ರಕ್ತದಾನ ಶಿಬಿರ ನಡೆಯಿತು.
ಶಿಬಿರ ಉದ್ಘಾಟಿಸಿದ ಕೆರೂಡಿ ಹೆಲ್ತ್ಕೇರ್ ಸಂಸ್ಥೆಯ ಚೇರ್ಮನ್ ಡಾ. ಬಿ.ಎಚ್. ಕೆರೂಡಿ ಮಾತನಾಡಿ, ಆಸ್ಪತ್ರೆಯ ವಾರ್ಷಿಕೋತ್ಸವ ನಿಮಿತ್ತ ಪ್ರತಿವರ್ಷ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗುತ್ತಿದ್ದು, ಸ್ವಯಂ ಪ್ರೇರಣೆಯಿಂದ ಹಲವರು ರಕ್ತದಾನ ಮಾಡುತ್ತಿದ್ದಾರೆ. ಶಿಬಿರದಲ್ಲಿ ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದ 47 ರೋಗಿಗಳನ್ನು ಮತ್ತು ಹೃದಯರೋಗಕ್ಕೆ ಸಂಬಂಧಿಸಿದ 115 ರೋಗಿ ಗಳನ್ನು ಉಚಿತವಾಗಿ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಹೇಳಿದರು.
ಅಲ್ಲದೆ, ಆರೋಗ್ಯ ತಪಾಸಣೆ ಶಿಬಿರದಲ್ಲಿ 20 ರೋಗಿಗಳಿಗೆ ಕ್ಷ-ಕಿರಣ, 40 ಜನರಿಗೆ ರಕ್ತ ತಪಾಸಣೆ, 27 ಜನರು ರಕ್ತದಾನ ಮಾಡಿದ್ದಾರೆ. ಶಿಬಿರದಲ್ಲಿ 10 ಜನರಿಗೆ ಎಂಜಿಯೋಗ್ರಾಫಿ ಪರೀಕ್ಷೆ ಮಾಡಿಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ. ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಮುತುವರ್ಜಿ ವಹಿಸಬೇಕು ಎಂದರು.
ಸಂಸ್ಥೆಯ ನಿರ್ದೇಶಕಿ ಡಾ. ಅನುಸೂಯಾ ಬಿ. ಕೆರೂಡಿ, ಡಾ. ಸೋಮಶೇಖರ ಬಿ. ಕೆರೂಡಿ, ಡಾ. ನಾರಾಯಣ ಎಂ., ಡಾ. ಸುನಿತಾ ಎಸ್. ಕೆರೂಡಿ, ಡಾ. ಚಂದ್ರಶೇಖರ ಬಿ.ಕೆರೂಡಿ, ಡಾ. ಕ್ಷಮತಾ ಸಿ.ಕೆರೂಡಿ, ಡಾ. ಸಂತೋಷ ಚಿಕ್ಕೋಡಿ, ಕ್ಯಾನ್ಸರ್ ತಜ್ಞ ಡಾ.ಸುರೇಶ ಉಳ್ಳಾಗಡ್ಡಿ, ಡಾ. ಚೈತ್ರಾ ದೇಶಪಾಂಡೆ, ಡಾ.ಈರಪ್ಪ ಮದಭಾವಿ, ಡಾ.ಶರತಕುಮಾರ ಕೆ.ಎಲ್., ಡಾ.ಹಂಸಾ ನಂದಿನಿ, ಪತ್ರಕರ್ತ ಮಹೇಶ ಅಂಗಡಿ ಇದ್ದರು.