ಹೈದರಾಬಾದ್: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯವಾದ ರಾಮ ಮಂದಿರ ಉದ್ಘಾಟನೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇದೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶದ ಅಸಂಖ್ಯಾತ ಹಿಂದುಗಳು ದಿನಗಣನೆ ಮಾಡುತ್ತಿದ್ದಾರೆ. ರಾಮಲಲ್ಲಾ ವಿಗ್ರಹ ಸ್ಥಾಪನೆಗೆ ಸಾಕ್ಷಿಯಾಗಲು ಸಹಸ್ರಾರು ಜನರು ಕಾಯುತ್ತಿದ್ದಾರೆ. ಇದರ ನಡುವೆ ಹರಕೆಯೊತ್ತ ಕೆಲವರು ಈಗಾಗಲೇ ಅಯೋಧ್ಯೆಯತ್ತ ಸಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಮುಸ್ಲಿಂ ಮಹಿಳೆಯೊಬ್ಬರು ಅಯೋಧ್ಯೆಗೆ ಪಾದಯಾತ್ರೆ ಕೈಗೊಂಡ ಸುದ್ದಿಯನ್ನು ಓದಿದ್ದೆವು. ಇದೀಗ 64 ವರ್ಷದ ವ್ಯಕ್ತಿಯೊಬ್ಬರು ಹೊರಕೆಯನ್ನು ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದಾರೆ.
ಅಯೋಧ್ಯೆ ರಾಮ ಮಂದಿರಕ್ಕೆ ಉಡುಗೊರೆ ನೀಡಲು ಚಿನ್ನದ ಲೇಪಿತ ಪಾದರಕ್ಷೆಯನ್ನು ತಲೆಯ ಮೇಲೆ ಹೊತ್ತು ಹೈದರಾಬಾದ್ ಮೂಲದ ಚಾರ್ಲ ಶ್ರೀನಿವಾಸ್ ಶಾಸ್ತ್ರಿ ಎಂಬುವರು ಪಾದಯಾತ್ರೆ ಹೊರಟಿದ್ದಾರೆ. ಜನವರಿ 22 ರಂದು ಉದ್ಘಾಟನಾ ಸಮಾರಂಭಕ್ಕೂ ಮೊದಲು ಶ್ರೀನಿವಾಸ್ ಅವರು ಚಿನ್ನದ ಲೇಪಿತ ಪಾದರಕ್ಷೆಗಳನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಹಸ್ತಾಂತರಿಸಲಿದ್ದಾರೆ.
ಚಾರ್ಲ ಶ್ರೀನಿವಾಸ್ ಶಾಸ್ತ್ರಿ ಅವರು ಅಕ್ಟೋಬರ್ 28 ರಂದು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ವೆದುರುಪಾಕ ಗ್ರಾಮದಿಂದ ಬೆಳ್ಳಿಯಿಂದ ಮಾಡಿದ ಪಾದರಕ್ಷೆಗಳೊಂದಿಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಪ್ರಯಾಣದ ಸಮಯದಲ್ಲಿ ಪಾದರಕ್ಷೆಗಳಿಗೆ ಚಿನ್ನದ ಲೇಪನ ಇರಬೇಕಿತ್ತು ಅಂತ ಅವರಿಗೆ ಅನಿಸಿದೆ. ಇದಾದ ಬಳಿಕ ಹೈದರಾಬಾದ್ನಲ್ಲಿರುವ ಅಕ್ಕಸಾಲಿಗರಿಗೆ ಪಾದರಕ್ಷೆಗಳನ್ನು ಕಳುಹಿಸಿ ಮಾರ್ಪಾಡು ಮಾಡಿಸಿದ್ದಾರೆ.
ಅಂದಹಾಗೆ ಚಿನ್ನದ ಲೇಪಿತ ಪಾದರಕ್ಷೆಗಳು ತಲಾ 12.5 ಕೆ.ಜಿ. ತೂಗುತ್ತವೆ. ಇದರ ಬೆಲೆ ಬರೋಬ್ಬರಿ 1.2 ಕೋಟಿ ರೂಪಾಯಿ. ಜನವರಿ 13ರೊಳಗೆ ಶಾಸ್ತ್ರಿ ಅಯೋಧ್ಯೆಗೆ ತಲುಪಲಿದ್ದಾರೆ. ಬಳಿಕ ಪಾದರಕ್ಷೆಗಳನ್ನು ದೇವಾಲಯದ ಒಳಗೆ ಇಡಲಾಗುವುದು ಎಂದು ಯುಪಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಶ್ರೀನಿವಾಸ್ ತಿಳಿಸಿದರು.
ಮಂದಿರದ ವೈಶಿಷ್ಟ್ಯಗಳು: ರಾಮ ಮಂದಿರ ಉದ್ಘಾಟನೆ ದಿನಾಂಕ ಹತ್ತಿರ ವಾಗುತ್ತಿದ್ದಂತೆ, ದೇವಾಲಯದ ಕುರಿತ ಹಲವು ಮಾಹಿತಿಗಳನ್ನು ಟ್ರಸ್ಟ್ ಹಂಚಿಕೊಂಡಿದೆ. ಗುರುವಾರ ಟ್ವೀಟ್ ಮೂಲಕ ಹಲವು ಮಾಹಿತಿಗಳನ್ನು ನೀಡಿದೆ.
* ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಾಣ
* 380 ಅಡಿ ಉದ್ದ (ಪೂರ್ವ-ಪಶ್ಚಿಮ), 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ.
* ಮೂರು ಅಂತಸ್ತಿನದ್ದಾಗಿದ್ದು, ಪ್ರತಿ ಮಹಡಿಯು 20 ಅಡಿ ಎತ್ತರವಿದೆ. ಇದು ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ.
* ಮುಖ್ಯ ಗರ್ಭಗುಡಿಯಲ್ಲಿ ಭಗವಾನ್ ಶ್ರೀರಾಮನ ಬಾಲ್ಯದ ರೂಪ (ಬಾಲರಾಮ) ವಿಗ್ರಹ, ಮೊದಲ ಮಹಡಿಯಲ್ಲಿ ಶ್ರೀರಾಮ ದರ್ಬಾರ್ ಇರುತ್ತದೆ.
* ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನೆ ಮತ್ತು ಕೀರ್ತನ ಮಂಟಪ ಎಂಬ ಐದು ಮಂಟಪಗಳು (ಹಾಲ್) ಇವೆ.
* ದೇವತೆಗಳು, ದೇವರು ಮತ್ತು ದೇವತೆಗಳ ಪ್ರತಿಮೆಗಳನ್ನು ಕಂಬ ಮತ್ತು ಗೋಡೆಗಳ ಮೇಲೆ ಕೆತ್ತಲಾಗಿದೆ.
* ಪೂರ್ವದಿಂದ ಸಿಂಹದ್ವಾರದ ಮೂಲಕ ಮಂದಿರಕ್ಕೆ ಪ್ರವೇಶ. 32 ಮೆಟ್ಟಿಲುಗಳು ಇರಲಿವೆ.
* ಅಂಗವಿಕಲರು ಮತ್ತು ವೃದ್ಧರ ಅನುಕೂಲಕ್ಕಾಗಿ ಇಳಿಜಾರು ಮತ್ತು ಲಿಫ್ಟ್ ಇವೆ.
* ಆವರಣದ ನಾಲ್ಕು ಮೂಲೆಗಳಲ್ಲಿ ಸೂರ್ಯ ದೇವ, ದೇವಿ ಭಗವತಿ, ಗಣೇಶ ಮತ್ತು ಶಿವನ ಮಂದಿರ ಇದೆ.
* ಉತ್ತರದಲ್ಲಿ ಅನ್ನಪೂರ್ಣ ಮಂದಿರ, ದಕ್ಷಿಣದಲ್ಲಿ ಹನುಮಂತನ ಮಂದಿರವಿದೆ.
* ಮಂದಿರ ನಿರ್ಮಾಣ ವೇಳೆ ಎಲ್ಲಿಯೂ ಕಬ್ಬಿಣ ಬಳಸುವುದಿಲ್ಲ
* ಅಗ್ನಿ ಸುರಕ್ಷತೆಗಾಗಿ ನೀರು ಸರಬರಾಜು ಮತ್ತು ಸ್ವತಂತ್ರ ವಿದ್ಯುತ್ ಕೇಂದ್ರವನ್ನು ಹೊಂದಿದೆ.
* ಯಾತ್ರಾರ್ಥಿಗಳಿಗೆ ವೈದ್ಯಕೀಯ ಸೌಲಭ್ಯಗಳು, ಲಾಕರ್ ಸೌಲಭ್ಯ ಇದೆ
* ಸ್ನಾನದ ಪ್ರದೇಶ, ವಾಶ್ರೂಮ್ಳು, ವಾಶ್ಬಾಸಿನ್, ತೆರೆದ ಟ್ಯಾಪ್ಗಳು ಇತ್ಯಾದಿಗಳೊಂದಿಗೆ ಪ್ರತ್ಯೇಕ ಬ್ಲಾಕ್ ನಿರ್ಮಾಣ
ಅಯೋಧ್ಯೆ ರಾಮಮಂದಿರದ ಹೈಟೆಕ್ ಸೆಕ್ಯುರಿಟಿಗೆ ಖರ್ಚಾಗಿರುವ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!