ಬೆಳಗಾವಿ: ಇಟ್ಟಿಗೆ ತುಂಬಿದ ಲಾರಿಯಲ್ಲಿ 35 ಲಕ್ಷ ರೂ. ಮೌಲ್ಯದ 600 ಬಾಕ್ಸ ಅಕ್ರಮ ಮದ್ಯ ಸಾಗಣೆ ಮಾಡುತ್ತಿದ್ದ ಜಾಲ ಬೇಧಿಸಿದ ಅಬಕಾರಿ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. ಮಧ್ಯಪ್ರದೇಶದ ಇಂಧೋರ್ನ ಧನಪಾಲಸಿಂಗ್ ತೋಮರ ಹಾಗೂ ರಾಜು ಕಂಠಿ ಎಂಬುವರನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆರೋಪಿಗಳ ಬಂಧನಕ್ಕೆ ತನಿಖೆ ಮುಂದುವರಿದಿದೆ.
ಇಟ್ಟಿಗೆ ತುಂಬಿದ ಲಾರಿಯಲ್ಲಿ ಅಕ್ರಮವಾಗಿ ಮದ್ಯ ಸಾಗಿಸಲಾಗುತ್ತಿದೆ ಎಂಬ ಮಾಹಿತಿಯ ಜಾಡು ಹಿಡಿದ ಪೊಲೀಸರು, ನಿಪ್ಪಾಣಿ ರಾಧಾನಗರ ರಸ್ತೆಯ ಅಂಡರ್ ಪಾಸ್ ತಿರುವಿನ ಹತ್ತಿರ ಲಾರಿಯನ್ನು ತಡೆದು ಪರಿಶೀಲಿಸಿದಾಗ ಮದ್ಯ ಪತ್ತೆಯಾಗಿದೆ. ಆರೋಪಿಗಳು ಗೋವಾ ಮದ್ಯವನ್ನು ಅಕ್ರಮವಾಗಿ ಗುಜರಾತ್ಗೆ ಸಾಗಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಡಾ. ವೈ.ಮಂಜುನಾಥ, ಬೆಳಗಾವಿ ಉತ್ತರ ಜಿಲ್ಲೆ (ಚಿಕ್ಕೋಡಿ) ಅಬಕಾರಿ ಅಧಿಕಾರಿ ಕೆ. ಅರುಣಕುಮಾರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕ ನಿಂಗರೆಡ್ಡಿ, ಲಿಂಗರಾಜು ಮತ್ತು ರಾಜು ಗೊಂಡೆ, ಅಬಕಾರಿ ಉಪ ನಿರೀಕ್ಷಕ ಎಸ್. ಗುಂಡಮಿ, ಸುನೀಲ ಡಿ., ಮಲ್ಲೇಶ ಉಪ್ಪಾರ, ಮಹಾಂತೇಶ ಭಂಡಗಾರ, ಪ್ರವೀಣ ರಂಗಸೂಬೆ, ಅನಿಲ ಹೂಗಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.