ಲಾಲ್ಬಾಗ್: ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಿಕ್ಷಕನೊಬ್ಬ ಶಾಲೆಯ ಕ್ಲಾಸ್ ರೂಮಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಲಾಲ್ಬಾಗ್ನಲ್ಲಿ ನಡೆದಿದೆ.
ರವೀಂದ್ರ ಕುಮಾರ್ ಶುಕ್ಲಾ(49) ಹೆಸರಿನ ಶಿಕ್ಷಕ ಕೆಲವು ವರ್ಷಗಳಿಂದ ಲಾಲ್ಬಾಗ್ನ ಸರ್ಕಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮಂಗಳವಾರದಂದು ಸರಿಯಾದ ಸಮಯಕ್ಕೆ ಶಾಲೆಗೆ ಬಂದಿದ್ದ ಅವರು ಪ್ರತಿದಿನದಂತೆ ತರಗತಿಗಳನ್ನು ನಡೆಸಿ, ಕೊನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದಾರೆ. ವಿದ್ಯಾರ್ಥಿಗಳೆಲ್ಲ ಮನೆಗೆ ತೆರಳಿದ ನಂತರ ತರಗತಿಗಳ ಬಾಗಿಲನ್ನು ಹಾಕಿ ಬಂದಿದ್ದಾರೆ. ಆದರೆ ಮತ್ತೆ ತರಗತಿಯೊಳಗೆ ತೆರಳಿರುವ ಅವರು ಅಲ್ಲಿದ್ದ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಾಲೆಯ ಸೆಕ್ಯುರಿಟಿ ರವೀಂದ್ರ ಅವರನ್ನು ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ನೋಡಿದ್ದು ಶಾಲೆಯ ಮುಖ್ಯಸ್ಥರಿಗೆ ತಿಳಿಸಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಸಹೋದ್ಯೋಗಿಗಳು ನೀಡಿರುವ ಮಾಹಿತಿಯ ಪ್ರಕಾರ ರವೀಂದ್ರ ಅವರಿಗೆ ಆಗಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದು ಅದೇ ನೋವು ಮತ್ತು ಚಿಂತೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಊಹಿಸಲಾಗಿದೆ. (ಏಜೆನ್ಸೀಸ್)