More

    4,450 ದಂಪತಿ ಜಗಳಕ್ಕೆ ಮುಕ್ತಿ

    ರಾಣೆಬೆನ್ನೂರ: ಕೇಂದ್ರ ಗೃಹ ಇಲಾಖೆ ಜಾರಿಗೊಳಿಸಿದ 112 ತುರ್ತು ಸ್ಪಂದನಾ ವಾಹನದ ವ್ಯವಸ್ಥೆ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿದೆ. ಈ ಮೊದಲು ಸಣ್ಣಪುಟ್ಟ ಜಗಳ, ಗಲಾಟೆ ಸೇರಿ ಯಾವುದೇ ಅಪರಾಧ ಪ್ರಕರಣ ನಡೆದರೂ ಪೊಲೀಸ್ ಠಾಣೆಗೆ ತೆರಳಿ ಬಗೆಹರಿಸಿಕೊಳ್ಳಬೇಕಿತ್ತು. ಆದರೆ, ಈಗ 112 ಸ್ಪಂದನಾ ವಾಹನದಿಂದ ಹಲವಾರು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರೆಯುತ್ತಿದೆ.

    ಪೊಲೀಸರ ನೆರವು ಪಡೆಯಲು ಜಿಲ್ಲೆಯಲ್ಲಿ 2019 ಸೆಪ್ಟೆಂಬರ್​ನಲ್ಲಿ ಆರಂಭಗೊಂಡಿರುವ ಒಂದೇ ಭಾರತ ಒಂದೇ ತುರ್ತು ಕರೆ ಪರಿಕಲ್ಪನೆಯ 112 ತುರ್ತು ಸ್ಪಂದನಾ ವಾಹನದ ಸಹಾಯವಾಣಿಗೆ ಈವರೆಗೆ 81,099 ಕರೆಗಳು ಬಂದಿವೆ. ಅದರಲ್ಲಿ ಶೇ. 90ರಷ್ಟು ಪ್ರಕರಣಗಳನ್ನು ವಾಹನದ ಸಿಬ್ಬಂದಿ ಸ್ಥಳದಲ್ಲಿಯೇ ಬಗೆಹರಿಸಿದ್ದಾರೆ. ಇನ್ನುಳಿದ ಪ್ರಕರಣಕ್ಕೆ ಸಂಬಂಧಿಸಿ ನೊಂದವರಿಗೆ ತುರ್ತು ಸಹಾಯ ಮಾಡಿ ಆಯಾ ಸ್ಥಳದ ಸಮೀಪವಿರುವ ಠಾಣೆಗೆ ಕಳುಹಿಸಿಕೊಟ್ಟಿದ್ದಾರೆ.

    ಗಂಡ-ಹೆಂಡತಿ ಜಗಳವೇ ಅರ್ಧದಷ್ಟು: 112 ತುರ್ತು ಸ್ಪಂದನಾ ಸಹಾಯವಾಣಿಗೆ ಜಿಲ್ಲೆಯ ಮೂಲೆ, ಮೂಲೆಯಲ್ಲೂ ನಡೆಯುವ ಚಿಕ್ಕಪುಟ್ಟ ಗಲಾಟೆ, ಗಂಡ-ಹೆಂಡತಿ ಜಗಳ, ಮಹಿಳಾ ದೌರ್ಜನ್ಯ, ಕಳ್ಳತನ, ಅಪಘಾತ ಸೇರಿ ನಾನಾ ಬಗೆಯ ಪ್ರಕರಣಗಳ ಕುರಿತು ಕರೆಗಳು ಬಂದಿವೆ. ಅವುಗಳಲ್ಲಿ ಈವರೆಗೆ 4,450 ಗಂಡ-ಹೆಂಡತಿ ಜಗಳ (ಚಿಕ್ಕಪುಟ್ಟ ಜಗಳ), 778 ಅಪಘಾತದ ಪ್ರಕರಣ, 816 ಸಾರ್ವಜನಿಕವಾಗಿ ನಡೆಯುವ ಗಲಾಟೆ, 10 ದರೋಡೆ ಪ್ರಕರಣ, 29 ಬೆಂಕಿ ಅವಘಡ, 225 ಕೋವಿಡ್ ಪ್ರಕರಣ, 334 ಕಳ್ಳತನ ಪ್ರಕರಣ, 37 ಸಾರ್ವಜನಿಕರಿಗೆ ಸಹಾಯ, 227 ಇತರ ಪ್ರಕರಣ ಸೇರಿ 81,099 ಪ್ರಕರಣಗಳ ಕರೆ ಬಂದಿದೆ.

    ಕರೆ ಮಾಡಿದ ತಕ್ಷಣವೇ ಸ್ಥಳಕ್ಕೆ: ಜಿಲ್ಲೆಯಲ್ಲಿ 112 ತುರ್ತು ಸೇವೆಗಾಗಿ ಒಟ್ಟು 15 ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಒಂದು ವಾಹನದಲ್ಲಿ ಒಬ್ಬ ಎಎಸ್​ಐ, ಕಾನ್​ಸ್ಟೆಬಲ್ ಹಾಗೂ ವಾಹನ ಚಾಲಕ ಸೇರಿ ಮೂವರು ಸಿಬ್ಬಂದಿ ಇರುತ್ತಾರೆ. ಪೊಲೀಸ್, ಅಗ್ನಿಶಾಮಕದಳ, ಆಂಬುಲೆನ್ಸ್ ಸೇವೆ ಸೇರಿ ಯಾವುದೇ ತುರ್ತು ಸಂದರ್ಭದಲ್ಲಿ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಸಾಕು ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಂ ವ್ಯವಸ್ಥೆಯಡಿ ಎಲ್ಲಿಂದಲೇ ಕರೆ ಬಂದರೂ ತುರ್ತಾಗಿ ಅಲ್ಲಿಗೆ ತಲುಪಿ ರಕ್ಷಣೆ ಒದಗಿಸುತ್ತಾರೆ. ಕರೆ ಸ್ವೀಕರಿಸಿದ ತಕ್ಷಣ ಘಟನಾ ಸ್ಥಳಕ್ಕೆ 5ರಿಂದ 17 ನಿಮಿಷದಲ್ಲಿ ವಾಹನ ತಲುಪುತ್ತದೆ. ದಿನದ 24 ಗಂಟೆಯೂ ಸೇವೆ ಲಭ್ಯವಿರುವುದರಿಂದ ಜನರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಿದೆ.

    ತಪ್ಪಿದ ಗೋಳಾಟ: ಜಿಲ್ಲೆಯಲ್ಲಿ 21 ಪೊಲೀಸ್ ಠಾಣೆಗಳಿವೆ. ಸಣ್ಣಪುಟ್ಟ ಜಗಳ, ಆಸ್ತಿ ವಿವಾದ, ಪತಿ-ಪತ್ನಿಯರ ಜಗಳ, ಅಪಘಾತ ಹಾಗೂ ಕಳ್ಳತನ ಪ್ರಕರಣ ಸೇರಿ ನಿತ್ಯವೂ ನಾನಾ ಬಗೆಯ ಪ್ರಕರಣ ನಡೆಯುತ್ತಲೆ ಇರುತ್ತವೆ. ಸಣ್ಣಪುಟ್ಟ ಜಗಳಗಳಿಂದ ಹಿಡಿದು ಏನೇ ಇದ್ದರೂ ಜನತೆ ಪ್ರತಿಯೊಂದನ್ನೂ ಠಾಣೆಗೆ ಹೋಗಿ ಸರಿಪಡಿಸಿಕೊಳ್ಳಬೇಕಿತ್ತು. ಆದರೆ, ಪೊಲೀಸ್ ಇಲಾಖೆ 112 ತುರ್ತು ಸ್ಪಂದನಾ ವಾಹನದ ಮೂಲಕ ಜನಸ್ನೇಹಿಯಾಗಿರುವುದರಿಂದ ಜನತೆ ಚಿಕ್ಕಪುಟ್ಟ ಜಗಳಕ್ಕೂ ಪೊಲೀಸ್ ಠಾಣೆಗೆ ಅಲೆದಾಡುವ ಗೋಳಾಟ ತಪ್ಪಿದಂತಾಗಿದೆ. ಜತೆಗೆ ಪೊಲೀಸ್ ಠಾಣೆಯವರಿಗೂ ಹೊರೆ ಕಡಿಮೆಯಾಗಿದೆ.

    2019ರಲ್ಲಿ ಜಿಲ್ಲೆಯಲ್ಲಿ 112 ತುರ್ತು ಸ್ಪಂದನಾ ವಾಹನದ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ವಾಹನದ ಸೇವೆಗೆ ಜನರಿಂದ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಇದೀಗ 15 ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಜನರಿಗೆ ಇದರಿಂದ ಬಹಳ ಉಪಯೋಗವಾಗಿದೆ. ಚಿಕ್ಕಪುಟ್ಟ ಸಮಸ್ಯೆಗಳು ಸ್ಥಳದಲ್ಲಿಯೆ ಬಗೆಹರಿಯುತ್ತಿವೆ.

    | ಹನುಮಂತರಾಯ, ಎಸ್ಪಿ ಹಾವೇರಿ

    112 ತುರ್ತು ವಾಹನದವರು ಫೋನ್ ಮಾಡಿದ ಕೂಡಲೆ ಬಂದು ಸಮಸ್ಯೆ ಬಗೆಹರಿಸುತ್ತಿದ್ದಾರೆ. ಇದರಿಂದ ನಾವು ಕೂಡ ಬಡಾವಣೆಯಲ್ಲಿ ಸಮಸ್ಯೆ ಎದುರಾದಾಗ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ/ಕರೆ ಮಾಡಿ ಪೊಲೀಸರನ್ನು ಕರೆತರುವ ಪರಿಪಾಠ ತಪ್ಪಿದೆ.

    | ರೇಣುಕವ್ವ ರಮಾಳದ, ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts