ಬ್ಯಾಡಗಿ: ಆಣೂರು ಭಾಗ ಸೇರಿ ತಾಲೂಕಿನ 42 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಈ ವರ್ಷವೇ ಚಾಲನೆ ಸಿಗಲಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು.
ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಉಪವಿಭಾಗ, ಗ್ರಾಮ ಪಂಚಾಯಿತಿ ಆಶ್ರಯದಲ್ಲಿ 2020-21 ಸಾಲಿನ ಮನೆ,ಮನೆಗೂ ಗಂಗೆ ಯೋಜನೆಯಡಿ ನೀರು ಸರಬರಾಜು ಯೋಜನೆಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಬುಡಪನಹಳ್ಳಿ ಕೆರೆ ತುಂಬಿಸುವ ಯೋಜನೆ ಹಾಗೂ ಆಣೂರು ಕೆರೆ ತುಂಬಿಸುವ ಯೋಜನೆ ಸುಮಾರು 300 ಕೋಟಿ ರೂ.ವೆಚ್ಚದಲ್ಲಿ ಕಾರ್ಯಗತವಾಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಮನೆ,ಮನೆಗೂ ಗಂಗೆ ಯೋಜನೆಯಲ್ಲಿ ಪ್ರತಿ ವ್ಯಕ್ತಿಗೂ 55 ಲೀಟರ್ ಶುದ್ಧ ನೀರು ಒದಗಿಸುತ್ತಿದೆ. ಮೂರು ವರ್ಷದ ಅವಧಿಯಲ್ಲಿ ಕ್ಷೇತ್ರಕ್ಕೆ 700 ಕೋ.ರೂ. ಅನುದಾನ ತಂದಿರುವೆ ಎಂದರು.
ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ ಮಾತನಾಡಿ, ಸರ್ಕಾರ ರೈತರ ಹಿತಕಾಯಲು ಬದ್ದವಾಗಿದ್ದು, ನಮ್ಮ ಹೊಲ, ನಮ್ಮ ರಸ್ತೆ ಯೋಜನೆ ಹಾಗೂ ಎಪಿಎಂಸಿ ವತಿಯಿಂದ ಗ್ರಾಮೀಣ ಪ್ರದೇಶಕ್ಕೆ ರಸ್ತೆ ನಿರ್ಮಾಣ ಕೈಗೊಂಡಿದೆ ಎಂದರು.
ಜಿ.ಪಂ. ಸದಸ್ಯೆ ಸುಮಂಗಲಾ ಪಟ್ಟಣಶೆಟ್ಟಿ, ತಾ.ಪಂ. ಸದಸ್ಯ ಗುಡ್ಡಪ್ಪ ಕೋಳೂರು, ಗ್ರಾ.ಪಂ. ಉಪಾಧ್ಯಕ್ಷ ಭೀಮಪ್ಪ ನಾಯ್ಕರ, ಎಪಿಎಂಸಿ ನಿರ್ದೇಶಕ ಕೆ.ಎಸ್. ನಾಯಕರ, ಗ್ರಾ.ಪಂ. ಸದಸ್ಯರಾದ ಶೇಖರಪ್ಪ ದಾನಣ್ಣನವರ, ಶಿವಗಂಗವ್ವ ಕಾಯಕದ, ವನಿತಾ ಓಲೇಕಾರ, ಫಕೀರಪ್ಪ ಗುಳೇದ, ಪ್ರಕಾಶ ಅಜ್ಜಮ್ಮನವರ, ಮಂಜುಳಾ ನಾಯ್ಕರ, ತುಳಸವ್ವ ಕಾಳೇರ, ರೇಣುಕವ್ವ ನಾಯ್ಕರ, ರವಿ ಬಿದರಿ, ಶಶಿಕಲಾ ಚಕ್ರಸಾಲಿ, ಚವಡವ್ವ ಗಾದಾರಿ, ಸುನಂದಾ ಅಜ್ಜಮ್ಮನವರ, ಯಲ್ಲಪ್ಪ ಅಜ್ಜಮ್ಮನವರ, ಕುಡಿಯುವ ನೀರು, ನೈರ್ಮಲ್ಯ ವಿಭಾಗದ ಸಹಾಯಕ ಅಧಿಕಾರಿ ಆರ್.ಎಂ. ಸೊಪ್ಪಿನಮಠ, ಪಿಡಿಒ ಶಾರದಾ ಕುದರೇರ ಇತರರಿದ್ದರು.
12 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗೆ ಪ್ರಸ್ತಾವನೆ: ಬ್ಯಾಡಗಿಯಿಂದ ಕದರಮಂಡಲಗಿ, ಅಸುಂಡಿ, ಹೂಲಿಹಳ್ಳಿ ಮಾರ್ಗವಾಗಿ ಸುಮಾರು 12 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗೆ ಕೂಡುವ ರಸ್ತೆಯನ್ನು 9 ಮೀಟರ್ ರಸ್ತೆ, ಸಿ.ಡಿ., ಡ್ರೈನೇಜ್, ಹೈಮಾಸ್ಕ್ ಲೈಟ್ ಸೇರಿ ವಿವಿಧ ಆಧುನಿಕ ಶೈಲಿಯ ರಸ್ತೆ ನಿರ್ವಿುಸಲು ಪ್ರಸ್ತಾವನೆ ಕಳುಹಿಸಿದ್ದು, ಸರ್ಕಾರದ ಅನುಮೋದನೆಗಾಗಿ ಕಾಯಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.