ಹೊನ್ನಾವರ: ನಾಲ್ಕು ಸಾವಿರ ಅಕ್ಕಿ ಕಾಳಿನಲ್ಲಿ ಶಿವ ಪಂಚಾಕ್ಷರಿ ಸ್ತೋತ್ರವನ್ನು ಬರೆಯುವ ಮೂಲಕ ತಾಲೂಕಿನ ಬಳ್ಕೂರು ಗ್ರಾಮದ ಸುಮುಖ ಪಂಡಿತ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಅಬ್ದುಲ್ ಕಲಾಂ ವರ್ಲ್ಡ್ ರೆಕಾರ್ಡ್ ಕ್ಲಬ್ಗೆ ಸೇರಿದ್ದಾರೆ.
ಬಳ್ಕೂರು ಗ್ರಾಮದ ವಿದ್ವಾನ್ ಸುಬ್ರಹ್ಮಣ್ಯ ಪಂಡಿತ ಮತ್ತು ಪುಷ್ಪಲತಾ ಪಂಡಿತ ದಂಪತಿಯ ಪುತ್ರ.
ಸುಮುಖ ಪಂಡಿತ ಮೂಲತಃ ಬಿ.ಇ. ಮೆಕ್ಯಾನಿಕಲ್ ಪದವೀಧರ. ಸಾಂಪ್ರದಾಯಿಕ ಪೌರೋಹಿತ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ. ಏನಾದರೂ ಸಾಧನೆ ಮಾಡಬೇಕೆಂಬ ಹಂಬಲದ ಅವರು ಎರಡು ತಿಂಗಳ ಹಿಂದೆ ಗುರು ಪೂರ್ಣೆಮೆಯಂದು ನಾಲ್ಕು ಸಾವಿರ ಅಕ್ಕಿಕಾಳಿನಲ್ಲಿ ಶಿವ ಪಂಚಾಕ್ಷರಿ ಸ್ತೋತ್ರ ಬರೆಯಲು ಆರಂಭಿಸಿ ಕೇವಲ ಏಳು ದಿನಗಳಲ್ಲಿ ಪೂರ್ಣಗೊಳಿಸಿದ್ದಾರೆ.
ಸುಮುಖ ಅವರ ತಂದೆ ಸುಬ್ರಹ್ಮಣ್ಯ ಪಂಡಿತ ಅವರು ಬಳ್ಕೂರಿನ ಶಂಭು ಲಿಂಗೇಶ್ವರ ದೇವಾಲಯದ ಅರ್ಚರಾಗಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಪುಷ್ಪಲತಾ ಗೃಹಿಣಿ. ಸುಮುಖ ಅವರ ಆಸಕ್ತಿಗೆ ತಂದೆ-ತಾಯಿ ಪ್ರೋತ್ಸಾಹ ನೀಡುತ್ತಿದ್ದಾರೆ.