ಹುಬ್ಬಳ್ಳಿ: ಅವಳಿ ನಗರದ ನಿವಾಸಿಗಳಿಗೆ ಪ್ರತಿ 3 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲು ಕರ್ನಾಟಕ ಜಲ ಮಂಡಳಿ ಸಜ್ಜಾಗಿದ್ದು, ಬುಧವಾರ (ಜ. 29) ದಿಂದ ಪರೀಕ್ಷಾರ್ಥ ಚಾಲನೆ (ಟ್ರಯಲ್ ರನ್) ನಡೆಸಲಿದೆ.
ಮಲಪ್ರಭಾದಿಂದ ಹೆಚ್ಚುವರಿಯಾಗಿ ನಿತ್ಯ 40 ಮಿಲಿಯನ್ ಲೀಟರ್ (ಎಂಎಲ್ಡಿ) ನೀರೆತ್ತುವ 26 ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣಗೊಂಡ ಪರಿಣಾಮ ಈ ಯೋಜನೆ ಚಾಲನೆಗೊಳ್ಳಲಿದೆ. ಈ ಕಾಮಗಾರಿಯಡಿ ಸವದತ್ತಿ ಹಾಗೂ ಅಮ್ಮಿನಭಾವಿಯಲ್ಲಿ ನಿರ್ವಿುಸಿದ ವಿದ್ಯುತ್ ಸಬ್ ಸ್ಟೇಷನ್ಗೆ ಮಂಗಳವಾರ ವಿದ್ಯುತ್ ಪರಿವೀಕ್ಷಕರು (ಬೆಂಗಳೂರು) ಅನುಮತಿ ನೀಡಿದ್ದಾರೆ. ಇದು ಟ್ರಯಲ್ ರನ್ಗೆ ದಾರಿ ಮಾಡಿಕೊಟ್ಟಿದೆ.
‘ಪ್ರತಿ 3 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲು ಬುಧವಾರದಿಂದ ಟ್ರಯಲ್ ರನ್ ನಡೆಸಲಿದ್ದೇವೆ. ಕೆಲ ದಿನಗಳಲ್ಲಿ ಈ ಆವರ್ತನೆ ನಿಯಮಿತಗೊಳ್ಳಲಿದೆ. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ರ್ಚಚಿಸಿ ಉದ್ಘಾಟನೆಗೆ ದಿನ ನಿಗದಿ ಪಡಿಸಬೇಕಿದೆ’ ಎಂದು ಜಲಮಂಡಳಿ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ ಮಾಡ್ಯಾಳ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಅವಳಿ ನಗರದ ಬಹುತೇಕ ವಾರ್ಡ್ಗಳಲ್ಲಿ ಸದ್ಯ ಪ್ರತಿ 5-6 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದೀಗ ಹೆಚ್ಚುವರಿಯಾಗಿ 40 ಎಂಎಲ್ಡಿ ನೀರು ಲಭ್ಯವಾಗುತ್ತಿರುವುದರಿಂದ ಪ್ರತಿ 3 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುವುದಾಗಿದೆ ಜಲಮಂಡಳಿ ಹೇಳಿದೆ. ಮಳೆಗಾಲಕ್ಕೂ ಪೂರ್ವ ಅವಳಿ ನಗರದಲ್ಲಿ ಪ್ರತಿ 7-8 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಆಗಸ್ಟ್ನಲ್ಲಿ ಸುರಿದ ದಾಖಲೆಯ ಮಳೆಗೆ ಕುಡಿಯುವ ನೀರಿನ ಮೂಲವಾದ ಕಲಘಟಗಿ ನೀರಸಾಗರ ಜಲಾಶಯ ಪೂರ್ಣ ಭರ್ತಿಯಾದ ಪರಿಣಾಮ ಪ್ರತಿ 5 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲು ಸಾಧ್ಯವಾಗಿತ್ತು. ಸೆಪ್ಟೆಂಬರ್ 2016ರಲ್ಲಿ ನೀರ ಸಾಗರ ಜಲಾಶಯ ಬರಿದಾಗಿತ್ತು.
ನಿರಂತರ ನೀರು ಪೂರೈಕೆ ಸ್ಥಗಿತ: ಅವಳಿ ನಗರದ ಕೆಲ ವಾರ್ಡ್ಗಳಿಗೆ ಸೀಮಿತವಾಗಿರುವ ನಿರಂತರ ನೀರು ಯೋಜನೆಯಡಿ ನೀರು ಪೂರೈಕೆ ವ್ಯವಸ್ಥೆ ಸೋಮವಾರ ರಾತ್ರಿಯಿಂದ ಮಂಗಳವಾರ ಮಧ್ಯಾಹ್ನದವರೆಗೆ ಸ್ಥಗಿತಗೊಂಡ ಪರಿಣಾಮ ಜನರು ಪರದಾಡಿದರು. ಕೆಲ ಎತ್ತರದ ಪ್ರದೇಶಗಳಿಗೆ ಮಂಗಳವಾರ ರಾತ್ರಿಯಾದರೂ ನೀರು ಪೂರೈಕೆ ಇರಲಿಲ್ಲ.
ಮಲಪ್ರಭಾದಿಂದ ಹೆಚ್ಚುವರಿಯಾಗಿ 40 ಎಂಎಲ್ಡಿ ನೀರು ಎತ್ತುವ ಕಾಮಗಾರಿ ಪೂರ್ಣಗೊಂಡು ಪರೀಕ್ಷಾರ್ಥ ಚಾಲನೆಗೆ ಸಿದ್ಧತೆ ಮಾಡಿಕೊಳ್ಳಲು ಅಮ್ಮಿನಭಾವಿ ಹಾಗೂ ಸವದತ್ತಿಯಲ್ಲಿ ಶಟ್ಡೌನ್ (ಪೂರೈಕೆ ಸ್ಥಗಿತ) ಪಡೆದಿದ್ದರಿಂದ ನೀರು ಪೂರೈಕೆಯಾಲ್ಲಿ ವ್ಯತ್ಯಯವಾಗಿದೆ. ಈ ಕುರಿತು ಮುಂಚಿತವಾಗಿ ಪ್ರಕಟಣೆ ನೀಡಿದ್ದೇವೆ ಎಂದು ಜಲಮಂಡಳಿ ಹೇಳಿದೆ. ಆದರೆ, ಮಂಗಳವಾರ ರಾತ್ರಿಯಾದರೂ ಶಕ್ತಿ ಕಾಲನಿ ಸುತ್ತಮುತ್ತಲಿನ ಬಡಾವಣೆಗಳಿಗೆ ನೀರು ಪೂರೈಕೆ ಪುನಾರಂಭಗೊಂಡಿರಲಿಲ್ಲ.