ಅಥಣಿ, ಬೆಳಗಾವಿ: ಶ್ರೀಶೈಲ ಜಗದ್ಗುರುಗಳು ಅ.29 ರಿಂದ ಜ.15ರ ವರೆಗೆ ತಾಲೂಕಿನ ಯಡೂರ ಗ್ರಾಮದಿಂದ ಶ್ರೀಶೈಲಕ್ಕೆ ಪಾದಯಾತ್ರೆ ಹೊರಟಿದ್ದು, ಯಶಸ್ಸಿಗೆ ಎಲ್ಲ ಭಕ್ತರೂ ಸಹಕರಿಸೋಣ ಎಂದು ವಿಪ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.
ತಾಲೂಕಿನ ಶಿವಣಗಿ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ದ್ವಾದಶ ಪೀಠಾರೋಹಣ ಮತ್ತು ಜನ್ಮ ಸುವರ್ಣ ಮಹೋತ್ಸವ ಅಂಗವಾಗಿ ಅವರೇ ಈ ಪಾದಯಾತ್ರೆ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಪಾದಯಾತ್ರೆ ಸವಿನೆನಪಿಗಾಗಿ ಯಡೂರಿನಿಂದ ಶ್ರೀಶೈಲದವರೆಗೆ ರಸ್ತೆ ಎರಡೂ ಬದಿ ಸಸಿ ನೆಡಲಾಗುತ್ತಿದ್ದು, 700 ಕಿ.ಮೀ ಬೇಕಾಗುವಷ್ಟು ಸಸಿಗಳನ್ನು ಅರಣ್ಯ ಇಲಾಖೆಯಿಂದ ಉಚಿತವಾಗಿ ಪೂರೈಸಲು ಸಚಿವ ದಿ.ಉಮೇಶ ಕತ್ತಿ ಆದೇಶ ಮಾಡಿದ್ದರು ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಾದಯಾತ್ರೆ ಸಮಿತಿ ಗೌರವ ಅಧ್ಯಕ್ಷರಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಅಧ್ಯಕ್ಷರಾಗಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಉಪಾಧ್ಯಕ್ಷರಾಗಿ ಮಾಜಿ ಡಿಸಿಎಂ ವಿಪ ಸದಸ್ಯ ಲಕ್ಷ್ಮಣ ಸವದಿ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಮುಖಂಡರಾದ ಶೇಖರ ನೇಮಗೌಡ, ಚಿದಾನಂದ ಸವದಿ, ಚಂದ್ರಶೇಖರ ಯಲ್ಲಟ್ಟಿ, ಮಲ್ಲಿಕಾರ್ಜುನ ಗೋಟಖಿಂಡಿ, ಮಹಾದೇವ ಹೊನ್ನಳಿ, ತಮ್ಮಣ್ಣ ತೇಲಿ, ಶಾಂತಿನಾಥ ನಂದೇಶ್ವರ ಇತರರಿದ್ದರು.