ಕಾಗವಾಡ, ಬೆಳಗಾವಿ: ಅತಿವೃಷ್ಟಿ ಹಾಗೂ ನೆರೆಹಾವಳಿಯಿಂದ ಮನೆಗಳು ಬಿದ್ದಲ್ಲಿ ಹಾಗೂ ಯಾವುದೇ ಜೀವಹಾನಿ ಆದಲ್ಲಿ 24 ಗಂಟೆಯ ಒಳಗೆ ಮೇಲಧಿಕಾರಿಗಳಿಗೆ ವರದಿ ಒಪ್ಪಿಸುವಂತೆ ಚಿಕ್ಕೋಡಿ ಜಿಲ್ಲಾ ನೋಡಲ್ ಅಧಿಕಾರಿ ಎಲ್.ವೈ.ರೂಡಗಿ ಹೇಳಿದರು.
ಕಾಗವಾಡ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಗವಾಡ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನೆರೆ ಹಾವಳಿ ಹಾಗೂ ಅತಿವೃಷ್ಟಿಯಿಂದ ನಿಮ್ಮ ವ್ಯಾಪ್ತಿಗಳಲ್ಲಿ ಜರುಗುವ ಘಟನೆಗಳ ಬಗ್ಗೆ ತೀವ್ರ ನಿಗಾ ವಹಿಸಬೇಕು ಎಂದು ಸೂಚಿಸಿದರು.
ಯಾವೊಬ್ಬ ಅಧಿಕಾರಿಯೂ ಮೇಲಧಿಕಾರಿಗಳ ಒಪ್ಪಿಗೆ ಪಡೆಯದೆ ತಮ್ಮ ಸ್ಥಳ ಬಿಟ್ಟು ತೆರಳುವಂತಿಲ್ಲ ಜತೆಗೆ ರಜೆ ತೆಗೆದುಕೊಳ್ಳುವಂತಿಲ್ಲ. ಮನೆ ಬಿದ್ದಲ್ಲಿ ಹಾಗೂ ಜೀವಹಾನಿಯಾದಲ್ಲಿ ಸಂಪೂರ್ಣ ಮಾಹಿತಿ ಪಡೆದು, ವಿವರವನ್ನು ನೀಡಬೇಕು ಎಂದರು.
ಅಧ್ಯಕ್ಷ ವಹಿಸಿದ್ದ ಕಾಗವಾಡ ತಹಸೀಲ್ದಾರ್ ರಾಜೇಶ್ ಬುರ್ಲಿ ಮಾತನಾಡಿ, ತಾಲೂಕಿನಲ್ಲಿ ಆಗುವ ವಿಪತ್ತು ಎದುರಿಸಲು ಎಲ್ಲ ಅಧಿಕಾರಿಗಳ ಸಹಕಾರ ಅಗತ್ಯವಾಗಿದೆ. ಗ್ರಾಮ ಲೆಕ್ಕಾಧಿಕಾರಿ, ಪಿಡಿಒಗಳು ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ನಿರ್ವಹಿಸಬೇಕು ಎಂದು ಕರೆ ನೀಡಿದರು. ಬಿಇಒ ಎಂ.ಆರ್.ಮುಂಜೆ, ಸಿಡಿಪಿಒ ಸಂಜಯಕುಮಾರ ಸದಲಗೆ, ಆರೋಗ್ಯಾಧಿಕಾರಿ ಪುಷ್ಪಲತಾ ಸುಣ್ಣದಕಲ್, ಕೃಷಿ ಇಲಾಖೆ ಅಧಿಕಾರಿ ಕೆ.ಟಿ.ಬಿರಾದಾರ, ಪಪಂ ಮುಖ್ಯಾಧಿಕಾರಿ ರವೀಂದ್ರ ಸನಗೌಡ, ಮಹಾಂತೇಶ ಕವಲಾಪುರ, ಸದಾಶಿವ ಬಬಲಾದಿ, ಕೆ.ರವಿ, ಪ್ರವೀಣ ಹುಣಸಿಕಟ್ಟಿ, ಮಲ್ಲಿಕಾರ್ಜುನ ಮಗದುಮ್ಮ ಇತರರಿದ್ದರು.