ಶಿವಮೊಗ್ಗ: ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರಿದಿದ್ದು ತುಂಗಾ, ವರದಾ, ಕುಮದ್ವತಿ ಸೇರಿ ಕೆಲ ಸಣ್ಣಪುಟ್ಟ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕಳೆದೊಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ 200ಕ್ಕೂ ಅಧಿಕ ಮನೆಗಳು, 30ಕ್ಕೂ ಅಧಿಕ ಕೊಟ್ಟಿಗೆಗಳು, 800ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.
ಜು.19ರಿಂದ ಮಂಗಳವಾರದವರೆಗೆ ಒಟ್ಟಾರೆ 402 ಮಿ.ಮೀ ಮಳೆಯಾಗಿದೆ. ಸರಾಸರಿ ಮಳೆ 168 ಮಿ.ಮೀ ಇದ್ದು 234 ಮಿ.ಮೀನಷ್ಟು ಮಳೆ ವಾಡಿಕೆಗಿಂತ ಹೆಚ್ಚಾಗಿದೆ. ಸಾಗರ, ತೀರ್ಥಹಳ್ಳಿ, ಹೊಸನಗರ, ಸೊರಬ ಸೇರಿ ಜಿಲ್ಲೆಯ ಹಲವೆಡೆ 206 ಮನೆಗಳ ಗೋಡೆಗಳು ಕುಸಿದಿವೆ. 34 ಜಾನುವಾರುಗಳ ಕೊಟ್ಟಿಗೆಗಳು, 815 ಹೆಕ್ಟೇರ್ ಕೃಷಿ ಮತ್ತು 30.5 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಇದೇ ವೇಳೆ 9 ಜಾನುವಾರುಗಳು ಹಸುನೀಗಿವೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಅಣೆಕಟ್ಟುಗಳು, ಜಲಪಾತಗಳು ಮತ್ತು ನದಿ ನೀರಿಗೆ ಇಳಿಯುವುದು, ಈಜಾಡುವುದು ಮತ್ತು ಸೆಲ್ಫಿ ತೆಗೆದುಕೊಳ್ಳುವುದನ್ನು ಹಾಗೂ ಅಪಾಯಕಾರಿ ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಭೇಟಿಯನ್ನು ನೀರಿನ ಹರಿವು ಕಡಿಮೆಯಾಗುವವರೆಗೆ ನಿಷೇಧಸಲಾಗಿದೆ. ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೂಚನಾ ಫಲಕಗಳನ್ನು ಅಳವಡಿಸಿ ಸಿಬ್ಬಂದಿ ನಿಯೋಜಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ನೀರಿನ ಹರಿವು ಕಡಿಮೆ ಆಗುವವರೆಗೆ ನಿಷೇಧಿತ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡದಂತೆ ಜಿಲ್ಲಾಡಳಿತ ಕೂಡ ಮನವಿ ಮಾಡಿದೆ.