ಶಿರಸಿ: ಬರಗಾಲ ಹಾಗೂ ನೀರಿನ ತುಟಾಗ್ರತೆಯಂತಹ ತುರ್ತು ಸನ್ನಿವೇಶದಲ್ಲಿ ಸಮಸ್ಯೆ ನಿವಾರಿಸಲು ಸರ್ಕಾರ ಕೊರೆಯಿಸಿದ ಹಲವು ಕೊಳವೆಬಾವಿಗಳು ನಿರುಪಯುಕ್ತವಾಗಿವೆ.
2014-15ನೇ ಸಾಲಿನಿಂದ 2017-18ನೇ ಸಾಲಿನವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರೀಕ್ಷಿತ ಮಳೆಯಾಗಿರಲಿಲ್ಲ. ಜತೆಗೆ ನದಿ, ತೊರೆಗಳು ಭಣಗುಡುತ್ತಿದ್ದವು. ತೆರೆದ ಬಾವಿಗಳಂತೂ ಖಾಲಿಯಾಗಿದ್ದವು. ಅಂತರ್ಜಲ ಮಟ್ಟ ಕುಸಿತದಿಂದ ಕುಡಿಯುವ ನೀರಿಗೂ ಸಮಸ್ಯೆ ತಲೆದೋರಿತ್ತು. ಹೀಗಾಗಿ ಶಿರಸಿ, ಮುಂಡಗೋಡ, ಹಳಿಯಾಳ, ಕುಮಟಾ, ಭಟ್ಕಳ ಮತ್ತು ಸಿದ್ದಾಪುರ ತಾಲೂಕುಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಲಾಗಿತ್ತು. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸರ್ಕಾರವೇ ಮುಂದಾಗಿ ಹೆಚ್ಚಿನ ಕೊಳವೆಬಾವಿಗಳನ್ನು ಕೊರೆಯಿಸಿತ್ತು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೇತೃತ್ವದಲ್ಲಿ 2014ರಿಂದ 2020ರ ಅವಧಿಯಲ್ಲಿ ಅಂದಾಜು 850 ಕೊಳವೆಬಾವಿಗಳನ್ನು ಕೊರೆಯಿಸಲಾಗಿತ್ತು. ಅವುಗಳಲ್ಲಿ ಅಂದಾಜು 200 ಕೊಳವೆಬಾವಿಗಳು ವಿಫಲವಾಗಿವೆ.
ಇಲಾಖೆ ಮೂಲಗಳ ಪ್ರಕಾರ, ಹಳಿಯಾಳ, ಮುಂಡಗೋಡ ಮತ್ತು ಶಿರಸಿ ತಾಲೂಕುಗಳಲ್ಲಿ ಅನೇಕ ಕೊಳವೆಬಾವಿಗಳು ಬತ್ತಿ ಹೋಗಿವೆ. ನೀರಿನ ಲಭ್ಯತೆ ಕುರಿತು ವೈಜ್ಞಾನಿಕವಾಗಿ ಪರಿಶೀಲಿಸದೆ ತರಾತುರಿಯಲ್ಲಿ ಕೊಳವೆಬಾವಿ ಕೊರೆಯಿಸಿದ್ದೇ ಇದಕ್ಕೆ ಕಾರಣ ಎಂಬ ದೂರುಗಳು ಕೇಳಿ ಬರುತ್ತಿವೆ.
ಗುಡ್ಡಗಾಡು ಪ್ರದೇಶದಲ್ಲಿ ಕೊರೆಯಿಸಿದ ಎಲ್ಲ ಕೊಳವೆ ಬಾವಿಗಳು ಸಫಲವಾಗುವುದು ವಿರಳ. ಬಯಲು ನಾಡಿನಲ್ಲಾದರೆ ಬಹುತೇಕ ಸಫಲ ಆಗುತ್ತವೆ. ಇಲಾಖೆಯಿಂದ ಅಗತ್ಯ ಪರಿಶೀಲನೆ ನಡೆಸಿಯೇ ಕೊಳವೆಬಾವಿ ಕೊರೆಯಿಸಿದರೂ ಕೆಲ ಸ್ಥಳಗಳಲ್ಲಿ ನೀರು ಸಿಗುವುದಿಲ್ಲ. | ರಾಮಚಂದ್ರ ಗಾಂವಕರ ಜಿಪಂ ಇಂಜಿನಿಯರಿಂಗ್ ವಿಭಾಗದ ಎಇಇ