ಚಿತ್ರದುರ್ಗ: ರಾಜ್ಯದ 20 ಸಾವಿರ ಭಕ್ತರು ಶ್ರೀರಾಮನ ದರ್ಶನ ಮಾಡಿ ಹಿಂದಿರುಗಿದ್ದಾರೆ ಎಂದು ಅಯೋಧ್ಯೆ ದರ್ಶನ ಅಭಿಯಾನದ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ತಿಳಿಸಿದರು.
ರಾಮಲಲ್ಲಾ ದರ್ಶನಕ್ಕೆ ದಾವಣಗೆರೆ ಜಿಲ್ಲೆಯ 350 ಮಂದಿ ಚಿತ್ರದುರ್ಗ ರೈಲ್ವೆ ನಿಲ್ದಾಣದಿಂದ ಭಾನುವಾರ ವಿಶೇಷ ರೈಲಿನ ಮೂಲಕ ಪ್ರಯಾಣ ಬೆಳೆಸಿದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾರ್ಗ ಮಧ್ಯೆ ಗದಗ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ ಜಿಲ್ಲೆ ಸೇರಿ 1.5 ಸಾವಿರಕ್ಕೂ ಹೆಚ್ಚು ರಾಮಭಕ್ತರು ತೆರಳುತ್ತಿದ್ದಾರೆ. ಅಯೋಧ್ಯೆಯ ಸ್ವಯಂ ಸೇವಕರು ಭಕ್ತರಿಗೆ ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಕರ್ನಾಟಕಕ್ಕೆ ನಿಗದಿಪಡಿಸಿದ 20 ವಿಶೇಷ ರೈಲುಗಳ ಪೈಕಿ ಈಗಾಗಲೇ 9 ರೈಲುಗಳು ಅಯೋಧ್ಯೆಗೆ ತೆರಳಿವೆ ಎಂದು ಹೇಳಿದರು.
ಹರಿಹರ ಶಾಸಕ ಬಿ.ಪಿ.ಹರೀಶ್ ಮಾತನಾಡಿ, 500 ವರ್ಷಗಳಿಂದ ಶ್ರೀರಾಮಮಂದಿರ ನಿರ್ಮಾಣ ಸಂಬಂಧ ಅಸಂಖ್ಯಾತ ಹಿಂದುಗಳು ಹೊತ್ತಿದ್ದ ಕನಸನ್ನು ಪ್ರಧಾನಿ ನರೇಂದ್ರಮೋದಿ ಸಾಕಾರಗೊಳಿಸಿದ್ದಾರೆ. ದರ್ಶನಕ್ಕಾಗಿ ಭಕ್ತರಲ್ಲೂ ಉತ್ಸಾಹ ಹೆಚ್ಚಾಗಿದೆ. ಅದನ್ನು ಪೂರೈಸಲು ಸಿದ್ಧರಿದ್ದೇವೆ ಎಂದು ಹೇಳಿದರು.
ಬಿಜೆಪಿ ಮುಖಂಡ ಜಿ.ಎಸ್.ಅನಿತ್ಕುಮಾರ್ ಮಾತನಾಡಿ, ದಾವಣಗೆರೆ ರೈಲ್ವೆ ನಿಲ್ದಾಣದ ಮಾರ್ಗವಾಗಿ ಅಯೋಧ್ಯೆಗೆ ತೆರಳಲು ವಿಶೇಷ ರೈಲಿನ ವ್ಯವಸ್ಥೆ ಕಲ್ಪಿಸುವಂತೆ ರೈಲ್ವೆ ಮಂತ್ರಿಗೆ ಮನವಿ ಮಾಡಲಾಗಿದ್ದು, ಶೀಘ್ರ ಕ್ರಮವಹಿಸುವ ಭರವಸೆ ನೀಡಿದ್ದಾರೆ ಎಂದರು.
ರಾಮಮಂದಿರ ಭಾವಚಿತ್ರ, ಜೈ ಶ್ರೀರಾಮ್, ಕರ್ನಾಟಕ ಹೆಸರಿರುವ ಕೇಸರಿ ಶಾಲು ಧರಿಸಿದ್ದ ರಾಮಭಕ್ತರು ಜೈ ಶ್ರೀರಾಮ್ ಜೈ ಜೈ ಶ್ರೀರಾಮ್ ಎಂದು ಜಯಘೋಷ ಮೊಳಗಿಸಿದರು.
ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್, ರೈಲ್ವೆ ಪ್ರಮುಖ್ ವಿಜಯೇಂದ್ರ, ಮುಖಂಡರಾದ ವಿನಾಯಕ, ರಾಜಕುಮಾರ್ ಇತರರಿದ್ದರು.