ಲೋಕಾಪುರ: ಜನರನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸುವುದರಿಂದ ಸಹೋದರ ಭಾವನೆಯನ್ನು ಜಾಗತಗೊಳಿಸಿ ಸುಂದರ ಸಮಾಜ ನಿರ್ಮಿಸಲು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ರಾಜು ಎಸ್. ಹೇಳಿದರು.
ಸಮೀಪದ ಬದನೂರ ಗ್ರಾಮದ ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಡಾ. ಡಿ. ವೀರೇಂದ್ರ ಹೆಗ್ಗಡೆ ಬಿಡುಗಡೆ ಮಾಡಿರುವ 2 ಲಕ್ಷ ರೂ. ಗಳ ಡಿಡಿಯನ್ನು ದೇವಸ್ಥಾನದ ಸಮಿತಿಯವರಿಗೆ ನೀಡಿ ಅವರು ಮಾತನಾಡಿದರು.
ದೇವಸ್ಥಾನಗಳ ಜೀರ್ಣೋದ್ಧಾರ ಕಾಮಗಾರಿಗಳು ಪೂರ್ಣಗೊಳ್ಳದೇ ನಿಂತು ಹೋಗಿದ್ದಲ್ಲಿ ಅವುಗಳಿಗೆ ಸಹಾಯ ಧನ ನೀಡಿ ಮತ್ತೆ ಕಾಮಗಾರಿ ಆರಂಭಿಸಿದರೆ, ಬೇರೆ ಬೇರೆ ಮೂಲದಿಂದ ಹಣ ಸಂಗ್ರಹಗೊಂಡು ಕಾಮಗಾರಿಯು ಪೂರ್ಣಗೊಳ್ಳುವುದು. ಶ್ರೀಗಳ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ದೇವಸ್ಥಾನಗಳ ಜೀರ್ಣೋದ್ಧಾರ, ರುದ್ರಭೂಮಿ ಯೋಜನೆ, ಸಮುದಾಯ ಭವನಗಳ ನಿರ್ಮಾಣ, ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಟ್ಟಡ ನಿರ್ಮಾಣ, ಕೆರೆ ಮುಂತಾದ ಕಾಮಗಾರಿಗಳಿಗೆ ಶ್ರೀಕ್ಷೇತ್ರದಿಂದ ಸಹಾಯ ಧನ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಶಿವಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಕೆ.ಆರ್. ಪಾಟೀಲ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರಿಗೆ ಹಾಗೂ ತಾಲೂಕಾ ಯೋಜನಾಧಿಕಾರಿಗಳಿಗೆ, ಜೀರ್ಣೋದ್ಧಾರಕ್ಕೆ ಧನ ಸಹಾಯ ಮಾಡಿದ ಎಲ್ಲ ಮಿತ್ರರಿಗೆ, ಗ್ರಾಮಸ್ಥರಿಗೆ ಧನ್ಯವಾದಗಳನ್ನು ಹೇಳಿದರು.
ಉಪಾಧ್ಯಕ್ಷ ವೆಂಕಟೇಶ ಅಂಕಲಗಿ, ರವಿ ಜೀರಗಾಳ ಮತ್ತು ಹೆಬ್ಬಾಳ ವಿಭಾಗದ ವಿಸ್ತರಣಾಧಿಕಾರಿ ಜಗದೀಶ, ಗ್ರಾಮದ ಸರ್ವ ಭಕ್ತ ವಂದ ಮಹಿಳಾ ಸ್ವ ಸಹಾಯ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.