ಚಿಕ್ಕಮಗಳೂರು: ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 90 ಗ್ರಾಂ ತೂಕದ 5 ಲಕ್ಷ ರೂ. ಮೌಲ್ಯದ 18 ಚಿನ್ನದ ಉಂಗುರಗಳನ್ನು ವಸ್ತಾರೆ ಪೊಲೀಸ್ ಜಂಕ್ಷನ್ ಚೆಕ್ಪೋಸ್ಟ್ನಲ್ಲಿ ವಶಕ್ಕೆ ಪಡೆಯಲಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಾಹನ ತಡೆದು ತಪಾಸಣೆ ನಡೆಸುವ ವೇಳೆ ಚಿನ್ನಾಭರಣ ಪತ್ತೆಯಾಗಿದೆ. ಜಿಲ್ಲೆಯ ಗಡಿಭಾಗಗಳಲ್ಲಿ ಚೆಕ್ಪೋಸ್ಟ್ ನಿರ್ಮಿಸಿರುವಂತೆ ಜಿಲ್ಲೆಯ ಆಂತರಿಕ ಭದ್ರತೆ ನಿಟ್ಟಿನಲ್ಲಿ ತಾಲೂಕು ಮಧ್ಯೆಯೂ ಜಂಕ್ಷನ್ ಪಾಯಿಂಟ್ಗಳನ್ನು ತೆರೆಯಲಾಗಿತ್ತು. ನಗರ ಹೊರವಲಯದ ವಸ್ತಾರೆ ಬಳಿ ಚೆಕ್ಪೋಸ್ಟ್ ಮಾರ್ಗವಾಗಿ ಬಂದ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ 18 ಚಿನ್ನದ ಉಂಗುರಗಳು ಪತ್ತೆಯಾದವು. ಕಾರಿನಲ್ಲಿದ್ದವರ ಬಳಿ ಚಿನ್ನಕ್ಕೆ ಸಂಬಂಧಿಸಿದ ದಾಖಲೆಗಳು ಇಲ್ಲದ ಕಾರಣ ಉಂಗುರಗಳನ್ನು ವಶಕ್ಕೆ ಪಡೆಯಲಾಗಿದೆ. ಚಿಕ್ಕಮಗಳೂರು ವಿಜಯಪುರದ ಚಿನ್ನದ ವ್ಯಾಪಾರಿಯೊಬ್ಬರು ಚಿನ್ನದ ಗಟ್ಟಿ ಖರೀದಿಸಿ ಅದರಿಂದ ಉಂಗುರಗಳನ್ನು ತಯಾರಿಸಿ ಉಡುಪಿಯ ಜ್ಯುವೆಲರಿ ಅಂಗಡಿ ಮಾಲೀಕರಿಗೆ ಕೊಡಲು ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗುತ್ತಿದೆ.