ಸೊರಬ: ಇವಿಎಂ ಮತ್ತು ವಿವಿಪಿಎಟಿ ಕಾರ್ಯವೈಖರಿ ಕುರಿತು ಜಾಗೃತಿ ಮೂಡಿಸುವ ಅಭಿಯಾನ ಫೆ.13ರಿಂದ ತಾಲೂಕಿನ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯಲಿದೆ ಎಂದು ಇವಿಎಂ ಮತ್ತು ವಿವಿಪಿಎಟಿ ತಂಡದ ಮುಖ್ಯಸ್ಥ ಕೆ.ಜಿ.ಕುಮಾರ್ ತಿಳಿಸಿದರು. ಶುಕ್ರವಾರ ಪಟ್ಟಣದ ಪದವಿ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಮೊದಲ ಬಾರಿಗೆ ಮತದಾನ ಪಟ್ಟಿಯಲ್ಲಿ ಹೆಸರು ನೋಂದಾವಣಿ ಮಾಡಿಕೊಂಡ ಯುವ ಮತದಾರರಿಗಾಗಿ ಮತದಾನ ಕುರಿತು ಏರ್ಪಡಿಸಿದ್ದ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ಮತದಾನದ ಕುರಿತು ಜಾಗೃತಿ ಮೂಡಿಸಲಾಗುವುದು. ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಸ್ಥಿರ ಇವಿಎಂ ಮತ್ತು ವಿವಿಪಿಎಟಿಗಳ ಕೇಂದ್ರ ಸ್ಥಾಪಿಸಲಾಗುತ್ತದೆ. ಮತದಾನದ ಕುರಿತು ತಿಳಿದು ಕೊಳ್ಳಬಹುದಾಗಿದೆ. ಇದರಿಂದ ನಮ್ಮ ಮತ ಬೇರೆಯವರಿಗೆ ಬೀಳುತ್ತದೆ ಎಂದು ತಪ್ಪುಕಲ್ಪನೆ ದೂರಾಗಲಿದೆ ಎಂದರು.