ಬಿಜಾಪುರ (ಚತ್ತೀಸಘಡ್): ತಮ್ಮೂರನ್ನು ಸೇರಬೇಕೆಂಬುದಷ್ಟೇ ಅವರಿಗಿದ್ದ ಗುರಿ. ರಸ್ತೆಗಳಲ್ಲಿ ಸಂಚರಿಸಿದರೆ ಪೊಲೀಸರು ಅಡ್ಡಗಟ್ಟಬಹುದೆಂಬ ಭಯ. ಹೀಗಾಗಿ ಕಾಡು-ಮೇಡುಗಳಲ್ಲಿ ಅಲೆಯುತ್ತ, ಕಾಲ್ದಾರಿಯಲ್ಲಿ ಸಾಗುತ್ತ ಮುನ್ನಡೆದಿದ್ದರು. ಹೀಗವರು ಊರಿನ ದಾರಿ ಹಿಡಿದು ಮೂರು ದಿನಗಳೇ ಕಳೆದಿದ್ದವು. ಇನ್ನೊಂದು ತಾಸು ಹೆಜ್ಜೆ ಹಾಕಿದ್ದರೆ, ತಮ್ಮ ನೆಲೆಯನ್ನು ತಲುಪಿಕೊಳ್ಳುತ್ತಿದ್ದರು. ಆದರೆ, ನಡೆಯಬಾರದ್ದೊಂದು ಘಟನೆ ಘಟಿಸಿ ಹೋಯಿತು.
ತಾನು ಕುಟುಂಬದೊಂದಿಗಿದ್ದರೆ ಕೊಂಚ ನೆರವಾದೀತು ಎಂದು 12 ವರ್ಷದ ಬಾಲಕಿ ತೆಲಂಗಾಣದ ಮೆಣಸಿನಕಾಯಿ ಗದ್ದೆಗಳಲ್ಲಿ ಅವರೊಂದಿಗೆ ಕೆಲಸ ಮಾಡುತ್ತಿದ್ದಳು. ಆದರೆ, ಲಾಕ್ಡೌನ್ ಕಾರಣದಿಂದಾಗಿ ಕೆಲಸವೂ ಇಲ್ಲವಾಯಿತು. ಹೇಗೋ ಕಾಲ ಕಳೆಯುತ್ತಿದ್ದ ಅವರಿಗೆ ಎರಡನೇ ಬಾರಿ ಲಾಕ್ಡೌನ್ ವಿಸ್ತರಣೆಯಾದಾಗ ಊಟಕ್ಕೂ ತತ್ವಾರವಾಯಿತು. ಹೇಗಾದರೂ ಸರಿ ತಮ್ಮೂರು ಸೇರಿಕೊಳ್ಳದೇ ವಿಧಿಯಿರಲಿಲ್ಲ. ಹೀಗಾಗಿ 11 ಜನರಿದ್ದ ಆ ತಂಡ 150 ಕೀ.ಮಿ ದೂರದ ಊರಿಗೆ ಕಾಲ್ನಡಿಗೆಯಲ್ಲಿಯೇ ಸಾಗಲು ನಿರ್ಧರಿಸಿತು.
ಹೆದ್ದಾರಿ, ಮುಖ್ಯ ರಸ್ತೆಗಳಲ್ಲಿ ಸಾಗಿದರು ಪೊಲಿಸರು ಅಡ್ಡಗಟ್ಟಿ ಪ್ರಶ್ನಿಸುತ್ತಾರೆ ಎಂಬ ಹೆದರಿಕೆಯಿಂದಾಗಿ ಕಾಡು-ಮೇಡುಗಳಲ್ಲಿ ಅಲೆಯುತ್ತ ಸಾಗಿದರು. ಹೀಗೆ ಮೂರು ದಿನಗಳ ಪ್ರಯಾಣದ ಬಳಿಕ ಬಿಜಾಪುರ ಜಿಲ್ಲೆಯಲ್ಲಿರುವ ತಮ್ಮ ಗ್ರಾಮದಿಂದ ಕೇವಲ 14 ಕಿ.ಮೀ. ದೂರದಲ್ಲಿದ್ದರು.
ಇಷ್ಟರಲ್ಲಾಗಲೇ 12 ವರ್ಷದ ಬಾಲಕಿ ಜಮ್ಲೋ ಮಕದಮ್ ನಿಶ್ಯಕ್ತಿ ಹಾಗೂ ನಿರ್ಜಲೀಕರಣದಿಂದ ಬಳಲುತ್ತಿದ್ದಳು. ಸರಿಯಾಗಿ ಊಟ- ತಿಂಡಿ ಇಲ್ಲದ ಕಾರಣ ಅಪೌಷ್ಠಿಕತೆಯೂ ಅವಳನ್ನು ಕಾಡುತ್ತಿತ್ತು. ಇದರ ನಡುವೆಯೂ 140 ಕಿ.ಮೀ ದೂರವನ್ನು ಆಕೆ ನಡೆದಿದ್ದಳು. ಊರು ಸಮೀಪಿಸುತ್ತಿದ್ದಂತೆ ಕುಸಿದ ಆಕೆ ಮತ್ತೆ ಮೇಲೆಳಲಿಲ್ಲ. ಆಕೆಗೆ ವಾಂತಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿತ್ತು ಎಂದು ತಂದೆ ಆಂದೋರಾಂ ಮಕದಮ್ ಹೇಳಿದ್ದಾರೆ.
ಗ್ರಾಮಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಬದುಕುಳಿಯಲಿಲ್ಲ. ಆಕೆಗೆ ಕರೊನಾ ಸೋಂಕು ಇರಲಿಲ್ಲ ಎನ್ನುವುದು ಪರೀಕ್ಷೆಯಿಂದ ಖಚಿತವಾಗಿದೆ. ಅಪೌಷ್ಟಿಕತೆ, ಹಸಿವು ಹಾಗೂ ನಿರ್ಜಲೀಕರಣದಿಂದಾಗಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಚತ್ತೀಸಗಢ್ ಸರ್ಕಾರ ಆಕೆಯ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ಘೋಷಿಸಿದೆ. ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಮತ್ತೊಂದು ದುರಂತದ ಅಧ್ಯಾಯ ಸೇರಿಕೊಂಡಂತಾಗಿದೆ.
Fe