ಚಿಂತಾಮಣಿ : ವಾರದ ಹಿಂದಷ್ಟೇ ನಗರದ ಮನೆಯೊಂದರಲ್ಲಿ ಶ್ರೀಗಂಧ ಮತ್ತು ಗಾಂಜಾ ಮಾರಾಟದಲ್ಲಿ ತೊಡಗಿದ್ದ ಒಬ್ಬ ಮಹಿಳೆ ಹಾಗೂ ಇಬ್ಬರು ಪುರುಷರನ್ನು ಬಂಧಿಸಿ 42 ಕೆ.ಜಿ. ಶ್ರೀಗಂಧ ಮತ್ತು 4 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದ ನಗರಠಾಣೆ ಪೊಲೀಸರು, ಸೋಮವಾರ ರಾಮುಕುಂಟೆ ರಸ್ತೆಯಲ್ಲಿ ಬರೋಬ್ಬರಿ 10 ಲಕ್ಷ ರೂ.ಮೌಲ್ಯದ 32 ಕೆ.ಜಿ.ಗಾಂಜಾ ವಶಪಡಿಸಿಕೊಂಡಿದ್ದಾರೆ.
ನಗರದ ರಾಮುಕುಂಟೆ ರಸ್ತೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ನಿಂತಿದ್ದ ಕಾರಿನ ಮೇಲೆ ದಾಳಿ ನಡೆಸಿದ ಪೊಲೀಸರಿಗೆ, ಮಾದಕ ವಸ್ತುಗಳ ಕಳ್ಳಸಾಗಣೆ ಶಂಕೆ ಮೂಡಿ, ಪರಿಶೀಲಿಸಿದ್ದು ಈ ವೇಳೆ 32 ಕೆ.ಜಿ.ಗಾಂಜಾ ಸಿಕ್ಕಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ತಂಬಾಳಪಲ್ಲಿ ತಾಲೂಕಿನ ಗುಂಟಪಲ್ಲಿಯ ಶಂಕರ್ (33) ಮತ್ತು ಶಿಡ್ಲಘಟ್ಟದ ಮಹಮದಿ ಮಸೀದಿ ಬಳಿಯ ನಿವಾಸಿ ಶಾಬಾಜ್ (26) ಎಂಬುವವನನ್ನು ಬಂಧಿಸಲಾಗಿದೆ, ಶಂಕರ್ ಸದ್ಯ ಬಿ.ಕೊತ್ತಕೋಟೆ ಪಟ್ಟಣದ ಇಂದ್ರಮ್ಮ ಕಾಲನಿಯಲ್ಲಿ ವಾಸವಾಗಿದ್ದ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ಕುಮಾರ್ ತಿಳಿಸಿದ್ದಾರೆ.