More

    ಅಂಗಡಿ ಹುಡುಗರ ಮೇಲೆ ಹಲ್ಲೆ ಮಾಡಿ 1.90 ಲಕ್ಷ ರೂ. ದೋಚಿದ್ದ ಪುಡಿ ರೌಡಿಗಳ ಬಂಧನ

    ಬೆಂಗಳೂರು: ನಗರದಲ್ಲಿ ಪುಡಿರೌಡಿಗಳ ಹಾವಳಿ ಮತ್ತೆ ಹೆಚ್ಚಾಗಿದ್ದು, ಸಿಗರೇಟ್ ಹಣ ಕೇಳಿದಕ್ಕೆ ಅಂಗಡಿ ಹುಡುಗರ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿ 1.90 ಲಕ್ಷ ರೂ. ಎಗರಿಸಿ, ಪ್ರಾಣಬೆದರಿಕೆ ಹಾಕಿರುವ ಪ್ರಕರಣ ಕುಂದಲಹಳ್ಳಿಗೇಟ್ ಸಮೀಪದ ಕಾಂಡಿಮೆಂಟ್ಸ್‌ವೊಂದರಲ್ಲಿ ನಡೆದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಡೆಲಿವರಿ ಬಾಯ್ ಕಾರ್ತಿಕ್(20), ಅಲ್ಯೂಮಿನಿಯಂ ವರ್ಕ್ ಮಾಡುವ ಸಲ್ಮಾನ್(20) ಖಾಸಗಿ ಹೊಟೇಲ್ ಮ್ಯಾನೇಜರ್ ಕಾರ್ತಿಕ್(23) ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ವೈಟ್‌ಫೀಲ್ಡ್ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

    ಉಡುಪಿಯ ಬೈಂದೂರು ಮೂಲದ ನವೀನ್ ಕುಮಾರ್ ಹಾಗೂ ಪ್ರಜ್ವಲ್ ಶೆಟ್ಟಿ, ನಿತೀನ್ ಶೆಟ್ಟಿ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ಘಟನೆ ಅಂಗಡಿಯಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಡಿ.8 ರಾತ್ರಿ 11.30 ರ ಸಮಯದಲ್ಲಿ 7-8 ಜನರ ರೌಡಿಗಳ ಗುಂಪು ಕುಂದಲಹಳ್ಳಿ ಗೇಟ್ ಬಳಿಯಿರುವ ಬ್ರಹ್ಮಲಿಂಗೇಶ್ವರ ಬೇಕರಿಗೆ ಟೀ ಕುಡಿಯಲು ಮತ್ತು ಸಿಗರೇಟ್ ಸೇದಲು ಹೋಗಿದ್ದಾರೆ. ಬೇಕರಿಯವರು ಸಿಗರೇಟ್ ನೀಡಿ ಹಣ ಕೇಳಿದ್ದಾರೆ. ಹಣ ಕೇಳಿದ್ದಕ್ಕೆ ಬೇಕರಿ ಹುಡುಗರಿಗೆ ಪುಡಿ ರೌಡಿಗಳು ಅವ್ಯಾಚ್ಯ ಶಬ್ಧಗಳಿಂದ ನಿಂದಿಸುತ್ತಾ, ಮನಸೋ ಇಚ್ಚೆ ಹಿಗ್ಗಾಮುಗ್ಗಾ ಥಳಿಸಿ ಹಣ ತೆಗೆದುಕೊಂಡು ಪರಾರಿಯಾಗಿದ್ದರು. ಹಲ್ಲೆಗೊಳಗಾದವರು ಎಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ದೂರಿನಲ್ಲಿ ಏನಿದೆ?
    ಗುರುವಾರ ರಾತ್ರಿ 11.30 ರ ಸಮಯದಲ್ಲಿ 7-8 ಅಪರಿಚಿತರು ಟೀ ಕೇಳಿದ್ದು, ಅವರಿಗೆ ಕುಡಿಯಲು ಟೀ ಕೊಟ್ಟಿದ್ದು, ನಂತರ ಬೇಕೆಂದೇ ಕಿರಿಕಿರಿ ತೆಗೆದು ಹಣ ಕೊಡುವ ವಿಷಯದಲ್ಲಿ ತಗಾದೆ ತೆಗೆದು ಏಕಾಏಕಿ ಇಬ್ಬರೂ ಅಪರಿಚಿತರು ಅಂಗಡಿ ಒಳಗೆ ಬಂದು ಮನಬಂದಂತೆ ಪ್ಲಾಸ್ಟಿಕ್ ಕ್ರೇಟ್ ಮತ್ತು ಹೆಲ್ಮೆಟ್ ಹಾಗೂ ಮುಷ್ಠಿಯಿಂದ ಅಲ್ಲದೇ ನಮ್ಮ ಅಂಗಡಿಯಲ್ಲಿ ರಾಡ್‌ನಿಂದ ಮನಸೋ ಇಚ್ಛೆ ಥಳಿಸಿದ್ದಾರೆ. ನಂತರ ಪ್ರಜ್ವಲ್‌ಶೆಟ್ಟಿ, ನಿತೀನ್ ಶೆಟ್ಟಿ ಅವರ ಮೇಲೆಯೂ ಹಲ್ಲೆ ನಡೆಸಿ ಕಾಲಿನಿಂದ ತುಳಿದಿದ್ದಾರೆ. ಅಲ್ಲದೇ ಈ ಸಂದರ್ಭದಲ್ಲಿ ನನ್ನ ಕುತ್ತಿಗೆಯಲ್ಲಿದ್ದ 18 ಗ್ರಾಂ ತೂಕದ ಚಿನ್ನದ ಸರ, 25 ಸಾವಿರ ರೂ. ಬೆಲೆ ಬಾಳುವ ಚೈನ್ ತೆಗೆದುಕೊಂಡು ಹೋಗಿದ್ದಾರೆ. ಕಾಂಡಿಮೆಂಟ್ಸ್ ವಸ್ತುಗಳನ್ನು ಹಾಗೂ ಗ್ಲಾಸ್‌ಗಳನ್ನು ಒಡೆದು ಚೆಲ್ಲಾಪಿಲ್ಲಿ ಮಾಡಿ, ಕ್ಯಾಷ್ ಬಾಕ್ಸ್‌ನಲ್ಲಿ 1.90 ಲಕ್ಷ ರೂ. ಹಣವನ್ನು ತೆಗೆದುಕೊಂಡು ಹೋಗಿದ್ದಾರೆ. ಹೋಗುವಾಗ ಪೊಲೀಸ್‌ಗೆ ಏನಾದರೂ ದೂರು ನೀಡಿದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲ. ನಿಮ್ಮನ್ನು ಕೊಲೆ ಮಾಡುತ್ತೇವೆ. ತಕ್ಷಣ ಊರು ಬಿಟ್ಟು ಹೋಗಬೇಕು. ಇಲ್ಲವಾದಲ್ಲಿ ನಿಮ್ಮನ್ನು ಸಾಯಿಸುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ಹಲ್ಲೆಗೊಳಗಾದ ನವೀನ್ ಕುಮಾರ್ ಎಚ್‌ಎಎಲ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ
    ಬೇಕರಿ ಹುಡುಗರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್‌ಎಎಲ್ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಗಿದೆ. ಬೇಕರಿ-ಉದ್ಯಮಿದಾರರ ಸಂಘ ಮತ್ತು ಕನ್ನಡಪರ ಸಂಘಟನೆಯ ಹೋರಾಟಗಾರರು ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

    ಕೂಡಲೇ ಪುಡಿ ರೌಡಿಗಳನ್ನು ಬಂಧಿಸಬೇಕು. ಒಂದು ವೇಳೆ ಪುಡಿ ರೌಡಿಗಳನ್ನು ಇನ್ನೂ 24 ಗಂಟೆಯ ಒಳಗೆ ಬಂಧನ ಮಾಡಿಲ್ಲ ಅಂದರೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

    ಕ್ರಮಕ್ಕೆ ಗೃಹ ಸಚಿವರ ಸೂಚನೆ
    ಬೆಂಗಳೂರು ಕುಂದನಹಳ್ಳಿ ಗೇಟ್ ಸಮೀಪ ಬೇಕರಿಯೊಂದರ ಮೇಲೆ ನಡೆದ ದಾಂಧಲೆ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಘಟನೆಯ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ಗಳಿಂದ ಮಾಹಿತಿ ಪಡೆದ ಸಚಿವರು, ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ. ಶಾಂತಿಯುತವಾಗಿ ಜೀವನ ನಿರ್ವಹಣೆ ಮಾಡಿ ಕೊಂಡು ಬದುಕನ್ನು ಕಟ್ಟಿಕೊಂಡಿರುವ ಶ್ರಮಜೀವಿಗಳಿಗೆ ಯಾವುದೇ ರೀತಿಯ ಕಿರುಕುಳ ಆಗದಂತೆ ರಕ್ಷಣೆ ನೀಡಬೇಕು ಎಂದು ಪೊಲೀಸರಿಗೆ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts