ಹೊಸಕೋಟೆ: ಕನ್ನಡ ನಾಟಕ ಕಲೆ ಸಾಹಿತ್ಯ ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕನ್ನಡಕ್ಕಾಗಿ ನಾವು ಎಂಬ ವಿನೂತನ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದು, ಜಿಲ್ಲೆಯ ಹೊಸಕೋಟೆಯಲ್ಲಿ ಚಾಲನೆ ನೀಡಲಾಗಿದೆ ಎಂದು ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಆರಾಧ್ಯ ತಿಳಿಸಿದರು.
ನಗರದ ಜೆಸಿಆರ್ ಕನ್ವೆಂಷನ್ ಹಾಲ್ನಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ನವಚೇತನ ನೃತ್ಯ ಕಲಾ ಅಕಾಡೆಮಿಯಿಂದ 66ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡಕ್ಕಾಗಿ ನಾವು ಹಾಗೂ ಮಾತಾಡ್ ಮಾತಾಡ್ ಕನ್ನಡ ಅಭಿಯಾನ ಹಾಗೂ ನವ ನೃತ್ಯೋತ್ಸವ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ನಗರಸಭೆ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಒಬ್ಬ ಕಲಾವಿದನನ್ನು ಸೃಷ್ಟಿಸುವುದು, ಕಲೆಯನ್ನು ಕರಗತ ಮಾಡಿಕೊಳ್ಳುವುದು ಎಲ್ಲರಿಗೂ ಸಾಧ್ಯವಿಲ್ಲ. ಕಲೆಯನ್ನು ಕರಗತ ಮಾಡಿಕೊಳ್ಳಲು ಸಾಕಷ್ಟು ಪರಿಶ್ರಮದ ಅಗತ್ಯವಿದ್ದು, ಗುರುಗಳ ಸಹಕಾರದಿಂದ ಕಲಾಪೋಷಣೆಗೆ ನಮ್ಮನ್ನು ನಾವು ಆರ್ಪಿಸಿಕೊಳ್ಳಬೇಕು ಎಂದರು.
ಪ್ರತಿಯೊಬ್ಬ ಪಾಲಕರು ಮಕ್ಕಳಲ್ಲಿನ ಕಲೆ ಗುರುತಿಸಿ ಪ್ರೋತ್ಸಾಹಿಸಬೇಕಿದೆ. ಈ ಮೂಲಕ ದೇಶ ವಿದೇಶಗಳಲ್ಲಿ ಕಲೆಯ ಪ್ರದರ್ಶಿಸಲು ಪ್ರೇರೇಪಿಸಬೇಕು ಎಂದರು.
ಶ್ರೀ ನವಚೇತನ ನೃತ್ಯ ಕಲಾ ಅಕಾಡೆಮಿ ಗೌರವಾಧ್ಯಕ್ಷ ಡಿ.ಎಸ್. ರಾಜ್ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ನೃತ್ಯ ಕಲಿಯುವವರ ಸಂಖ್ಯೆ ಹೆಚ್ಚಾಗಿದೆ. ಶ್ರೀ ನವಚೇತನ ನೃತ್ಯಅಕಾಡೆಮಿ 11 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣ ನೀಡುತ್ತಿದೆ. ಕಲಾಸಕ್ತರಿಗೆ ಸಹಕಾರವಾಗಲು ನಗರದಲ್ಲಿ ನೃತ್ಯ ಅಕಾಡೆಮಿ ನಿರ್ಮಾಣಕ್ಕೆ ನಗರಸಭೆಯಿಂದ ನಿವೇಶನದ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಎಲ್ ಜಿ ೌಂಡೇಷನ್ ಅಧ್ಯಕ್ಷ ಲಕ್ಷ್ಮಣ್ ಗೌಡ, ನೃತ್ಯ ಅಕಾಡೆಮಿ ನಿರ್ಮಾಣಕ್ಕೆ 20 ಲಕ್ಷ ರೂ. ದೇಣಿಗೆ ನೀಡಲಿದ್ದಾರೆ. ಹಲವು ದಾನಿಗಳು ಸಹಕಾರದಿಂದ ಆದಷ್ಟು ಬೇಗ ನೃತ್ಯ ಅಕಾಡೆಮಿ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದರು.
ವಿವೇಕಾನಂದ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಗುಪ್ತಾ, ರೋಟರಿ ಸದಸ್ಯರಾದ ಸುರೇಶ್, ಆರ್ಟಿಸಿ ಗೋವಿಂದ್ ರಾಜ್, ಕಲಾವಿದ ಮಂಜುನಾಥ್ ಹಾಜರಿದ್ದರು.
ವಿವಿಧ ತಂಡಗಳಿಂದ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ಕರ್ನಾಟಕ ಪ್ರೌಢ ಶಿಕ್ಷಣ ಇಲಾಖೆಯಿಂದ ನೃತ್ಯ ಕಲೆಯಲ್ಲಿ ಉತ್ತೀರ್ಣರಾದ ಕಲಾವಿದರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.