ಕಾರವಾರ: ಜಿಲ್ಲೆಯ 11 ಜನರಲ್ಲಿ ಭಾನುವಾರ ಕೋವಿಡ್ ಸೋಂಕು ದೃಢಪಟ್ಟಿದೆ. ಕಾರವಾರದ ಐದು, ಸಿದ್ದಾಪುರ, ಭಟ್ಕಳದ ತಲಾ 2, ದಾಂಡೇಲಿ ಹಾಗೂ ಹಳಿಯಾಳದ ತಲಾ ಒಬ್ಬರಲ್ಲಿ ಪಾಸಿಟಿವ್ ಕಂಡುಬಂದಿದೆ.
ದಾಂಡೇಲಿ ಟೌನ್ಶಿಪ್ನ ಕಾನ್ವೆಂಟ್ ಪ್ರೖೆಮರಿ ಶಾಲೆ ಪ್ರದೇಶದ 79 ವರ್ಷದ ಖಾಸಗಿ ವೈದ್ಯರಿಗೆ ಸೋಂಕು ಕಾಣಿಸಿಕೊಂಡಿದೆ. ಸಿದ್ದಾಪುರ ಸರ್ಕಾರಿ ವೈದ್ಯರಿಗೆ ಕೆಲ ದಿನಗಳ ಹಿಂದೆ ಸೋಂಕು ಖಚಿತವಾಗಿತ್ತು. ಈಗ 44 ವರ್ಷದ ಆರೋಗ್ಯ ಕಾರ್ಯಕರ್ತರೊಬ್ಬರಲ್ಲಿ ಕಂಡುಬಂದಿದೆ. ಅಲ್ಲದೆ, ತಾಲೂಕು ಆಸ್ಪತ್ರೆಯಲ್ಲಿದ್ದ 73 ವರ್ಷದ ವೃದ್ಧೆಯಲ್ಲಿ. ಕಾರವಾರ ಕ್ರಿಮ್್ಸ ಆಸ್ಪತ್ರೆಯ 25 ವರ್ಷದ ಮಹಿಳಾ ನೌಕರರೊಬ್ಬರಿಗೂ ಸೋಂಕು ಕಾಣಿಸಿಕೊಂಡಿದೆ.
ಬೈತಖೋಲ್ನಲ್ಲಿ ಜು.10 ರಂದು ರೋಗ ಖಚಿತವಾದ ರೋಗಿ(ಪಿ.31582) ಸಂಪರ್ಕಕ್ಕೆ ಬಂದ 22 ವರ್ಷದ ವ್ಯಕ್ತಿಯಲ್ಲಿ ,ಬೆಂಗಳೂರಿನಿಂದ ವಾಪಸಾದ ಅಮದಳ್ಳಿ ಕಂತ್ರಿವಾಡದ 16 ವರ್ಷದ ಬಾಲಕನಲ್ಲಿ , ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಹಬ್ಬುವಾಡದ 27 ವರ್ಷದ ಯುವಕನಲ್ಲಿ, ನಗರದ 35 ವರ್ಷದ ಮಹಿಳೆಯಲ್ಲಿ ಸೋಂಕು ದೃಢವಾಗಿದೆ. ಭಟ್ಕಳದ ಹೆಬಳಗೆ ಬೆಂಗಳೂರಿನಿಂದ ವಾಪಸಾದ 25 ವರ್ಷದ ಯುವಕನಿಗೆ, ಬೆಳಕೆಯ 17 ವರ್ಷದ ಯುವಕನಲ್ಲಿ ಸೋಂಕು ಕಂಡು ಬಂದಿದೆ. ಭಟ್ಕಳ ಮೂಲದ 23 ವರ್ಷದ ವ್ಯಕ್ತಿ ಹಾಗೂ ಕುಮಟಾ ಮೂಲದ 63 ವರ್ಷದ ಇನ್ನೊಬ್ಬರು ಮಂಗಳೂರಿನಲ್ಲಿ ದಾಖಲಾಗಿದ್ದು, ಅವರಿಗೂ ಕರೊನಾ ಇರುವುದು ಖಚಿತವಾಗಿದೆ.
ಬಿಜೆಪಿ ಮುಖಂಡನಿಗೆ ಸೋಂಕು: ಹಳಿಯಾಳ ತಾಲೂಕಿನ ಬಸವಳ್ಳಿಯ 55 ವರ್ಷದ ಬಿಜೆಪಿ ಗ್ರಾಮೀಣ ಮುಖಂಡರೊಬ್ಬರಲ್ಲಿ ಸೋಂಕು ಕಂಡುಬಂದಿದೆ. ಅವರು ಹುಬ್ಬಳ್ಳಿ ಎಸ್ಡಿಎಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಅವರ ಗಂಟಲ ದ್ರವದ ಮಾದರಿ ಪರಿಶೀಲಿಸಿದಾಗ ಸೋಂಕು ದೃಢಪಟ್ಟಿದೆ. ಭಾನುವಾರ ಧಾರವಾಡ ಜಿಲ್ಲಾಡಳಿತದಿಂದ ಬಂದ ಮಾಹಿತಿಯಂತೆ ತಹಸೀಲ್ದಾರ್ ವಿದ್ಯಾಧರ ಗುಳಗುಳೆ ನೇತೃತ್ವದ ತಂಡ ಸೋಂಕಿತರನ್ನು ಕಾರವಾರ ಆಸ್ಪತ್ರೆಗೆ ಸೇರಿಸಿದೆ.
6 ಜನರ ಬಿಡುಗಡೆ: ಹಳಿಯಾಳದ 78 ವರ್ಷದ ವೃದ್ಧ, 72 ವರ್ಷದ ವೃದ್ಧೆ, 12 ವರ್ಷದ ಬಾಲಕಿ, ಶಿರಸಿಯ ಇಬ್ಬರು ಹಾಗೂ ಅಂಕೋಲಾದ ಒಬ್ಬ ಪುರುಷ ಸೇರಿ 6 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ನಿರ್ದೇಶಕ ಡಾ.ಗಜಾನನ ನಾಯಕ, ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್, ಡಾ.ಮಂಜುನಾಥ ಭಟ್, ಡಾ.ಸಂದೇಶ, ಡಾ.ಸಮರ್ಥ, ಡಾ.ಹಿತೇಶ ಮತ್ತು ಸಿಬ್ಬಂದಿ ಗುಣವಾದವರನ್ನು ಬೀಳ್ಕೊಟ್ಟರು.
ಕ್ರಿಮ್ಸ್ನಲ್ಲಿ ಒಟ್ಟು 47 ಜನ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಶಿರಸಿಯ 43 ವರ್ಷದ ಪುರುಷ ಕ್ರಿಟಿಕಲ್ ವಾರ್ಡ್ನಲ್ಲಿ ಇದ್ದು, ಆಮ್ಲಜನಕ ವ್ಯವಸ್ಥೆ ಮಾಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಕಾರವಾರದ 86 ವರ್ಷದ ವೃದ್ಧೆ ತೀವ್ರ ನಿಗಾ ಘಟಕದಲ್ಲಿ ಇದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಡಾ.ಗಜಾನನ ನಾಯಕ ಮಾಹಿತಿ ನೀಡಿದ್ದಾರೆ.
ಇನ್ನೊಂದು ಸಾವು
ಉಸಿರಾಟದ ಸಮಸ್ಯೆಯಿಂದ ಶನಿವಾರ ಮೃತಪಟ್ಟ ಭಟ್ಕಳದ ಸುಲ್ತಾನ್ ಸ್ಟ್ರೀಟ್ನ 69 ವರ್ಷದ ವೃದ್ಧನಲ್ಲಿ ಕರೊನಾ ಇರುವುದು ಖಚಿತವಾಗಿದೆ. ಕಳೆದ ಕೆಲ ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಶನಿವಾರ ಮುರ್ಡೆಶ್ವರ ಆಸ್ಪತ್ರೆಗೆ ಕರೆದೊಯ್ದು ಔಷಧ ಕೊಡಿಸಲಾಗಿತ್ತು. ಆದರೆ, ರಾತ್ರಿ ಅವರಿಗೆ ಉಸಿರಾಟದ ಸಮಸ್ಯೆ ತೀವ್ರಗೊಂಡು ಕೊನೆಯುಸಿರೆಳೆದಿದ್ದಾರೆ. ಕುಟುಂಬದ ನಾಲ್ವರು ಸದಸ್ಯರ ಸಮ್ಮುಖದಲ್ಲಿ ಪುರಸಭೆ ಪೌರ ಕಾರ್ವಿುಕರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಭಟ್ಕಳದ ಇಬ್ಬರು ಕರೊನಾದಿಂದ ಮಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಆದರೆ, ಅವರ ದಾಖಲೆ ಜಿಲ್ಲೆಗೆ ಸೇರ್ಪಡೆಯಾಗಿಲ್ಲ.
ಧಾರವಾಡ ಜಿಲ್ಲೆಗೆ ಚಿಕಿತ್ಸೆಗಾಗಿ ತೆರಳಿದ ಹುಣಸವಾಡ ಹಾಗೂ ಬಸವಳ್ಳಿ ಗ್ರಾಮಗಳ ಇಬ್ಬರಲ್ಲಿ ಕರೊನಾ ಸೋಂಕು ದೃಢವಾಗಿದೆ. ಇದರಿಂದ ಹೊರ ಜಿಲ್ಲೆಗಳಿಗೆ ಚಿಕಿತ್ಸೆಗಾಗಿ ತೆರಳುವವರು ಹಾಗೂ ಈಗಾಗಲೇ ತೆರಳಿದವರು ಕಡ್ಡಾಯವಾಗಿ ತಾಲೂಕಾಡಳಿತಕ್ಕೆ ಮಾಹಿತಿ ನೀಡಬೇಕು. ಇದರಿಂದ ಕೋವಿಡ್ ಹರಡದಂತೆ ಮುಂಜಾಗ್ರತೆ ಕೈಗೊಳ್ಳಲು, ನಿಗಾ ಇಡಲು ಅನುಕೂಲವಾಗುತ್ತದೆ.
ವಿದ್ಯಾಧರ ಗುಳಗುಳೆ ತಹಸೀಲ್ದಾರ್, ಹಳಿಯಾಳ