ಚಿತ್ರದುರ್ಗ: ಬರಗಾಲದ ಪರಿಹಾರವಾಗಿ ರೈತರಿಗೆ ಪ್ರತಿ ಹೆಕ್ಟೇರ್ಗೆ ಕೇವಲ 2 ಸಾವಿರ ರೂ. ಪಾವತಿಸುತ್ತಿರುವ ಸರ್ಕಾರದ ವಿರುದ್ಧ ರಾಜ್ಯ ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದಲ್ಲಿ ಮೆರವಣಿಗೆ ನಡೆಸಿದರು. ಬೀದಿಗಿಳಿದು ಭಿಕ್ಷಾಟನೆಗೆ ಮುಂದಾಗಿ ಈ ಹಣವನ್ನು ಸರ್ಕಾರಕ್ಕೆ ಕಳುಹಿಸುತ್ತೇವೆ ಎಂದು ಆಕ್ರೋಶ ಹೊರಹಾಕಿದರು. ತ್ವರಿತವಾಗಿ ಹೆಕ್ಟೇರ್ಗೆ 25 ಸಾವಿರ ರೂ., ಬೆಳೆ ವಿಮೆ ವಿತರಿಸಲು ಕ್ರಮವಹಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಜಿಲ್ಲೆಯನ್ನು ಬರಗಾಲವೆಂದು ಘೋಷಿಸಿದ್ದು, ಬೆಳೆ ಪರಿಹಾರ ಮತ್ತು ಬೆಳೆ ವಿಮೆ ಪಾವತಿ ಆಗದಿರುವುದು ಖಂಡನೀಯ. ಎನ್ಡಿಆರ್ಎಫ್ ಹಣ ಖಾತೆಗಳಿಗೆ ಜಮೆ ಆಗಿಲ್ಲ. ಮಧ್ಯಂತರ ಬೆಳೆ ವಿಮೆ ಕೂಡ ರೈತರ ಕೈಸೇರಿಲ್ಲ ಎಂದು ಕಿಡಿಕಾರಿದರು.
ಜಾನುವಾರುಗಳಿಗಾಗಿ ಗೋಶಾಲೆ ತೆರೆದು ಮೇವು, ನೀರು ಸಮರ್ಪಕವಾಗಿ ಪೂರೈಸಬೇಕು. ರೈತರು ಸ್ವಂತ ಖರ್ಚಿನಲ್ಲಿ ಟಿಸಿ ಮತ್ತು ಕಂಬಗಳನ್ನು ಅಳವಡಿಸಿಕೊಳ್ಳುವಂತೆ 2023ರ ಸೆಪ್ಟಂಬರ್ನಲ್ಲಿ ಜಾರಿಗೆ ತಂದ ಕಾಯ್ದೆ ಹಿಂಪಡೆಯಬೇಕು. ಮೊದಲಿನಂತೆ ಅಕ್ರಮ-ಸಕ್ರಮ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಎಲ್ಲ ಬ್ಯಾಂಕ್ನಲ್ಲಿರುವ ಸಾಲ ಮನ್ನಾ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದು ಕೋರಿದರು.
ಸಂಘದ ತಾಲೂಕು ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಮುಖಂಡರಾದ ಸಿ.ನಾಗರಾಜ ಮುದ್ದಾಪುರ, ಬಿ.ಪಿ.ತಿಪ್ಪೇಸ್ವಾಮಿ, ಎಸ್.ಕೆ.ಕುಮಾರಸ್ವಾಮಿ, ಎಂ.ಎಸ್.ಪ್ರಭು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಸಿದ್ದಪ್ಪ ಜಾನುಕೊಂಡ, ವೈ.ಎನ್.ಅಶೋಕ, ಬಿ.ಕೆಂಚಪ್ಪ, ಪಾಪಯ್ಯ, ರಂಗೇಗೌಡ ಇತರರಿದ್ದರು.