ರಿಪ್ಪನ್ಪೇಟೆ: ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಮನೆಯ ಸುತ್ತಮುತ್ತಲ ಪರಿಸರದಲ್ಲಿ ಸಿಗುವ ಸೊಪ್ಪು, ತರಕಾರಿ, ಹಣ್ಣುಗಳನ್ನು ಬಳಸಿ ಪೌಷ್ಟಿಕ ಆಹಾರ ತಯಾರಿಸಿ ಇಡೀ ಕುಟುಂಬದ ಆರೋಗ್ಯ ಕಾಪಾಡಬಹುದು ಎಂದು ಅಂಗನವಾಡಿ ಮೇಲ್ವಿಚಾರಕಿ ವನಮಾಲಾ ತಿಳಿಸಿದರು.
ಇಲ್ಲಿಗೆ ಸಮೀಪದ ಹಿರೇಜೇನಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯ ಅಂಗನವಾಡಿಗಳ ಒಕ್ಕೂಟದಿಂದ ಪೋಷಣಾ ಅಭಿಯಾನದಡಿ ಆಯೋಜಿಸಿದ್ದ ಪೌಷ್ಟಿಕ ಆಹಾರ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಪೌಷ್ಟಿಕ ಆಹಾರ ತಯಾರಿಕೆ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ನಡೆಸಲಾಗುತ್ತಿದೆ ಎಂದರು.
ಆರೋಗ್ಯ ಇಲಾಖೆಯ ಹಿರಿಯ ಸಹಾಯಕಿ ಕರಿಬಸಮ್ಮ ಮಾತನಾಡಿ, ರಾಸಾಯನಿಕ ಗೊಬ್ಬರ ಮತ್ತು ಔಷಧ ಸಿಂಪಡಿಸದ ಸೊಪ್ಪು ಮತ್ತು ತರಕಾರಿ ಬಳಕೆಯಿಂದ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದರು.
ಕೋಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪುರುಷ ಆರೋಗ್ಯ ಸಹಾಯಕ ರವಿ ಮಾತನಾಡಿ ಮೊಳಕೆ ಕಾಳು, ಮೆಂತೆ, ಜೀರಿಗೆ , ಅರಿಶಿನ ಇತ್ಯಾದಿ ಬಳಕೆಯಿಂದ ಉತ್ತಮ ಆರೋಗ್ಯಕರ ಜೀವನ ನಡೆಸಬಹುದು ಎಂದು ವಿವರಿಸಿದರು.