ದಾವಣಗೆರೆ: ಹರಿಹರದ ಬ್ರದರ್ಸ್ ಜಿಮ್, ಇಲ್ಲಿನ ಬೀರೇಶ್ವರ ವ್ಯಾಯಾಮ ಶಾಲೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಬಾಡಿ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಪಾರಿತೋಷಕ ಪಡೆಯಿತು.
ಕರ್ನಾಟಕ ರಾಜ್ಯ ಬಾಡಿ ಲಿಫ್ಟಿಂಗ್ ಅಸೋಸಿಯೇಷನ್ ಹಾಗೂ ಬೀರೇಶ್ವರ ವ್ಯಾಯಾಮ ಶಾಲೆ ಸಹಯೋಗದಲ್ಲಿ ಕ್ರೀಡಾಪ್ರೇಮಿ ಮಾಜಿ ಶಾಸಕ ಕೆ. ಮಲ್ಲಪ್ಪ ಸ್ಮರಣಾರ್ಥವಾಗಿ ಈ ಸ್ಪರ್ಧೆ ಆಯೋಜಿಸಲಾಗಿತ್ತು.
ಮಲೇಬೆನ್ನೂರಿನ ಝಲಕ್ ಜಿಮ್ ದ್ವಿತೀಯ ಹಾಗೂ ಮೈಸೂರಿನ ಅಪೋಲೋ ಜಿಮ್ ತೃತೀಯ ಸ್ಥಾನ ಪಡೆದವು. ಸಂಜೆ ನಡೆದ ಸಮಾರೋಪದಲ್ಲಿ ವಿಜೇತರಿಗೆ ಟ್ರೋಫಿ, ಪದಕ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಮೈಸೂರು, ಹಾವೇರಿ, ಹೊಸಪೇಟೆ ಸೇರಿ ವಿವಿಧೆಡೆಗಳಿಂದ ನೂರಕ್ಕೂ ಹೆಚ್ಚು ಬಾಡಿ ಲಿಫ್ಟಿಂಗ್ ಪಟುಗಳು ಭಾಗವಹಿಸಿದ್ದರು. ಸುಮಾರು 15ಕ್ಕೂ ಹೆಚ್ಚು ಮಹಿಳಾ ಪಟುಗಳು ಭಾಗಿಯಾಗಿದ್ದು ವಿಶೇಷವಾಗಿತ್ತು. ಕ್ರೀಡಾಪಟುಗಳ ದೇಹತೂಕ ಆಧರಿಸಿ, 55 ಕೆಜಿಯಿಂದ ಹಿಡಿದು 115 ಕೆಜಿವರೆಗೆ ಒಟ್ಟು 10 ವಿಭಾಗಗಳಲ್ಲಿ ಸ್ಫರ್ಧೆ ನಡೆಸಿ ವಿಜೇತರಿಗೆ ವೈಯಕ್ತಿಕ ಬಹುಮಾನ ನೀಡಲಾಯಿತು.
ಬೆಳಗ್ಗೆ ನಗರಸಭೆ ಮಾಜಿ ಅಧ್ಯಕ್ಷ ಬಿ.ವೀರಣ್ಣ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ ಸ್ಪರ್ಧೆಗೆ ಚಾಲನೆ ನೀಡಿದ್ದರು. ಸಂಜೆ ಸಮಾರೋಪದಲ್ಲಿ ಮೇಯರ್ ಬಿ.ಎಚ್.ವಿನಾಯಕ್, ಬಿಜೆಪಿ ಮಖಂಡ ಶ್ರೀನಿವಾಸ ದಾಸಕರಿಯಪ್ಪ, ಕರ್ನಾಟಕ ರಾಜ್ಯ ಬಾಡಿ ಲಿಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಕೆ. ಧರ್ಮರಾಜ್, ಕಾರ್ಯದರ್ಶಿ ಗುರುಸ್ವಾಮಿ, ಬೀರೇಶ್ವರ ವ್ಯಾಯಾಮ ಶಾಲೆಯ ಮುಖಂಡ ಜೆ.ಕೆ. ಕೊಟ್ರಬಸಪ್ಪ, ಪಾಲಿಕೆ ಸದಸ್ಯ ಜೆ.ಎನ್. ಶ್ರೀನಿವಾಸ್ ಇತರರಿದ್ದರು.