ರಾಮದುರ್ಗ: ಗ್ರಾಮೀಣ ಪ್ರದೇಶದಲ್ಲಿ ಬಂಡಿ ಶರ್ಯತ್ತು ಏರ್ಪಡಿಸುವುದರ ಉದ್ದೇಶವೇ ಜಾನುವಾರುಗಳು ದೈಹಿಕ ಆರೋಗ್ಯ ಕ್ಷಮತೆ ಹೆಚ್ಚಿಸುವುದಾಗಿದೆ ಎಂದು ಬಿಜೆಪಿ ಮುಖಂಡ ಪಿ.ಎಫ್ ಪಾಟೀಲ ಹೇಳಿದರು.
ತಾಲೂಕಿನ ಕಲ್ಲೂರ ಗ್ರಾಮದ ಶ್ರೀ ಕಲ್ಲೂರ ಸಿದ್ದೇಶ್ವರ ಜಾತ್ರೆ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಒಂದು ಎತ್ತು ಹಾಗೂ ಒಂದು ಕುದುರೆ ತೆರೆದ ಬಂಡಿ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮದ ಎಲ್ಲರೂ ಬೆರೆತು ಹಬ್ಬ ಆಚರಿಸಿದರೆ ಮಾತ್ರ ಪರಸ್ಪರ ಸಹೋದರತೆ, ಸಮಾನಭಾವ ಬೆಳೆಯಲು ಸಾಧ್ಯವಾಗುತ್ತದೆ. ಗ್ರಾಮೀಣ ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಹಬ್ಬಗಳು ಸಹಕಾರಿಯಾಗಿವೆ. ಭಕ್ತಿಯಿಂದ ನೆನೆದರೆ ಭಕ್ತರ ಇಷ್ಟಾರ್ಥಗಳನ್ನು ದೇವರು ಈಡೇರಿಸುತ್ತಾನೆ ಎಂದರು.
ಮುಳ್ಳೂರ ಅನ್ನದಾನೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ರೇಣಪ್ಪ ಸೋಮಗೊಂಡ ಮಾತನಾಡಿದರು. ಮುಳ್ಳೂರ ಗ್ರಾಪಂ ಅಧ್ಯಕ್ಷ ವಿಠ್ಠಲ ಸೋಮಗೊಂಡ, ಎಸ್.ಎಸ್. ಮುದೇನೂರ, ಚನ್ನಪ್ಪ ನವಲಗುಂದ, ವಿನೋದ ಯಾದವಾಡ, ಅಶೋಕ ನಲೂಡೆ, ಅರ್ಜುನ ಜಾಧವ, ಮಂಜುನಾಥ ನವಲಗುಂದ, ಉಮೇಶ ಸುಳ್ಳದ, ಪಾಂಡು ಜಾಧವ ಇತರರು ಇದ್ದರು.