ಯಲ್ಲಾಪುರ: ತಾಲೂಕಿನ ಹೊಸಳ್ಳಿ, ಕಿರವತ್ತಿ, ಮದನೂರ ಭಾಗದಲ್ಲಿ ಹತ್ತಿ ಬೆಳೆಗೆ ಕೀಟ ಬಾಧೆ ಆರಂಭವಾಗಿದೆ. ಕೀಟದಿಂದ ಬಾಧಿತವಾದ ಹೊಲಗಳಿಗೆ ಸಹಾಯಕ ಕೃಷಿ ನಿರ್ದೇಶಕ ಎಸ್.ಎಂ. ಕುಲಕರ್ಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೈತರಿಂದ ಮಾಹಿತಿ ಪಡೆದ ಅವರು, ಕೀಟಗಳ ನಿಯಂತ್ರಣಕ್ಕಾಗಿ ರೈತರಿಗೆ ಸಲಹೆಗಳನ್ನು ನೀಡಿದರು. ಹತ್ತಿ ಬೆಳೆದ ಹೊಲದಲ್ಲಿ ಚಿಕ್ಕ ಗಾತ್ರದ ಪ್ರೌಢ ಮತ್ತು ಮರಿ ಥ್ರಿಪ್ಸ್ ನುಸಿಗಳು ಎಲೆಯ ಕೆಳಗಡೆಯಿಂದ ರಸ ಹೀರುತ್ತವೆ. ಇದರಿಂದ ಎಲೆಗಳು ಮೊದಲು ಬಿಳಿ ಬಣ್ಣಕ್ಕೆ ತಿರುಗುತ್ತವೆ. ಬಳಿಕ ಬಿರುಸುಗೊಂಡು ಹರಿಯುತ್ತವೆ. ಇವು ಬಾಧೆಯು ತೀವ್ರಗೊಂಡ ಲಕ್ಷಣಗಳಾಗಿವೆ. ರಾಸಾಯನಿಕ ಸಸ್ಯ ಸಂರಕ್ಷಣಾ ಔಷಧ ಡೈಮಿಥೋಯೇಟ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ 2 ಮಿ.ಲೀ. ಬೆರೆಸಿ ಸಿಂಪಡಿಸಬೇಕು ಅಥವಾ ಇಮಿಡಾಕ್ಲೋಪ್ರಿಡ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ 1 ಮಿ.ಲೀ. ಬೆರೆಸಿ ಸಿಂಪಡಿಸಬೇಕು ಎಂದು ತಿಳಿಸಿದರು.
ಸಸ್ಯ ಸಂರಕ್ಷಣಾ ಔಷಧಗಳು ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ದೊರೆಯುತ್ತವೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಎಸ್.ಎಂ. ಕುಲಕರ್ಣಿ ಸಲಹೆ ನೀಡಿದರು.