More

    ಸ್ವಾವಲಂಬಿ ಜೀವನಕ್ಕೆ ಪೂರಕ

    ಹಾವೇರಿ: ಮಕ್ಕಳ ಸವೋತೋಮುಖ ಬೆಳವಣಿಗೆಗೆ ಮತ್ತು 3ರಿಂದ 18ವರ್ಷದವರೆಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವ ಉದ್ದೇಶವನ್ನು ಹೊಸ ಶಿಕ್ಷಣ ನೀತಿ ಹೊಂದಿದೆ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

    ನಗರದ ಜಿಲ್ಲಾ ಗುರುಭವನದಲ್ಲಿ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘದ ಜಿಲ್ಲಾ ಘಟಕ, ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ-2019ರ ಕುರಿತು ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಕೇವಲ ಜ್ಞಾನ ಮಾತ್ರವಲ್ಲದೆ ಸ್ವಾವಲಂಬಿ ಜೀವನಕ್ಕೆ ಬೇಕಾದ ಕೌಶಲಗಳನ್ನು ಒದಗಿಸಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸಹಾಯಕಾರಿಯಾಗಿದೆ. ಆತ್ಮನಿರ್ಭರ ಭಾರತ ನಿರ್ವಿುಸಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪೂರಕವಾಗಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಜಗತ್ತಿನ ಅಗತ್ಯಗಳಿಗೆ ತಕ್ಕಂತೆ ನಮ್ಮ ಶಿಕ್ಷಣ ಕ್ರಮದಲ್ಲಿ ಒಂದಷ್ಟು ಬದಲಾವಣೆಯಾಗಬೇಕಾದ ಅವಶ್ಯಕತೆಯಿತ್ತು. ಪ್ರತಿದಿನವೂ ಒಂದಿಲ್ಲೊಂದು ದಾರಿಯಲ್ಲಿ ಮುಂದಕ್ಕೆ ದೌಡಾಯಿಸುವ ಜಗತ್ತಿನೊಂದಿಗೆ ಹೆಜ್ಜೆ ಹಾಕಲು ನಾವು ಸಮರ್ಥರಾಗಬೇಕಿದೆ. ಭಾರತ ದೇಶದ ರಾಜ್ಯ ಕೇಂದ್ರಿತ ವ್ಯವಸ್ಥೆಯೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ನಮ್ಮ ಸಮಾಜವನ್ನು ಒಂದು ಸುಸ್ಥಿರ, ಸಮಾನ ಹಾಗೂ ಜೀವಂತಿಕೆಯುಳ್ಳ ಸಮಾಜವನ್ನಾಗಿ ಮಾರ್ಪಡಿಸಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮಹತ್ವದ್ದಾಗಿದೆ ಎಂದರು.

    ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಸಂದೀಪ ಬೂದಿಹಾಳ ಮಾತನಾಡಿ, ಹೊಸ ಶಿಕ್ಷಣ ನೀತಿಯಲ್ಲಿ ಯಾರೊಬ್ಬರೂ ನಿರುದ್ಯೋಗಗಳಾಗದೇ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಕಾರಿಯಾಗುವಂತಹ ಶಿಕ್ಷಣ ವ್ಯವಸ್ಥೆ ಇರಲಿದೆ. ಶಿಕ್ಷಣ ಎಂಬುದು ಕೇವಲ ಹೂಡಿಕೆಯಾಗಬಾರದು. ಇದನ್ನು ಕೇವಲ ವ್ಯವಹಾರ ದೃಷ್ಟಿಯಿಂದ ನೋಡದೇ ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ತಯಾರಿಸುವ ದೃಷ್ಟಿಯಲ್ಲಿ ನೋಡಬೇಕು. ಸ್ವಾವಲಂಬಿ ಜೀವನಕ್ಕೆ ಹೊಸ ಶಿಕ್ಷಣ ನೀತಿಯಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದ್ದು ಜನರ ಸಲಹೆ, ಸಹಕಾರ ಪಡೆದು ಜಾರಿಗೊಳಿಸಲಾಗುತ್ತದೆ ಎಂದರು.

    ಡಿಡಿಪಿಐ ಅಂದಾನೆಪ್ಪ ವಡಗೇರಿ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ತಳಹಂತದಲ್ಲಿ ಬದಲಾವಣೆ ತಂದರೆ ಬಹಳಷ್ಟು ಪ್ರಗತಿ ಸಾಧಿಸಲು ಸಾಧ್ಯ. ಶಿಕ್ಷಣದ ಸಮಗ್ರ ಬದಲಾವಣೆ ಪೂರ್ವ ಪ್ರಾಥಮಿಕ ಹಂತದಿಂದಲೇ ಆರಂಭಗೊಳ್ಳುವುದು ಉತ್ತಮ. ಹೊಸ ಶಿಕ್ಷಣ ನೀತಿಯಿಂದ ದೇಶದಲ್ಲಿ ಬಹಳಷ್ಟು ಬದಲಾವಣೆ ತರಲು ಅವಕಾಶವಿದ್ದು, ಇದಕ್ಕೆ ಎಲ್ಲರೂ ಕೈಜೋಡಿಸೋಣ ಎಂದರು.

    ಡಿಡಿಪಿಯು ನಾಗರಾಜಪ್ಪ, ಜಿಪಂ ಸದಸ್ಯ ಸಿದ್ದರಾಜ ಕಲಕೋಟಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಎಸ್.ಎಸ್. ನಿಸ್ಸೀಮಗೌಡ್ರ. ಕೆ.ಪಿ. ಬ್ಯಾಡಗಿ, ಪಿ.ಜೆ. ಓಲೇಕಾರ, ನಾಗರಾಜ ದ್ಯಾಮನಕೊಪ್ಪ, ಎಚ್.ಡಿ. ಗಂಟೇರ, ಎಚ್.ಬಿ. ಲಿಂಗಯ್ಯ, ಎಸ್.ಎಸ್. ಬೇವಿನಮರದ, ವೈ.ಬಿ. ಆಲದಕಟ್ಟಿ, ಪ್ರಭು ಹಲಗೇರಿ ಇತರರಿದ್ದರು. ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಶಾಂತಗಿರಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts